![](https://i0.wp.com/samajamukhi.net/wp-content/uploads/2020/02/anantkumar-hegde.jpg?resize=660%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಶಾರುಖ್ ಖಾನ್ ಲತಾ ಮಂಗೇಶ್ಕರ್ ಮೃತದೇಹದ ಮೇಲೆ ಉಗುಳಿದರೇ? ವಾಸ್ತವ ಏನು ಹೇಳುತ್ತದೆ? ಫ್ಯಾಕ್ಟ್ ಚೆಕ್
ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನರಾಗಿದ್ದು ಅವರ ಅಂತ್ಯಕ್ರಿಯೆ ನಿನ್ನೆ ಮುಂಬೈಯ ಶಿವಾಜಿ ಪಾರ್ಕ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತ್ತು.
![ಶಾರೂಕ್ ಖಾನ್ Sharukh Khan](https://i0.wp.com/media.kannadaprabha.com/uploads/user/imagelibrary/2022/2/7/w900X450/sharukhkhan.jpg?w=760&ssl=1)
https://www.youtube.com/shorts/X4WGoA42TDo
ಮುಂಬೈ/ಬೆಂಗಳೂರು: ಭಾರತದ ಗಾನಕೋಗಿಲೆ(Nightingale) ಲತಾ ಮಂಗೇಶ್ಕರ್(Lata Mangeshkar) ನಿಧನರಾಗಿದ್ದು ಅವರ ಅಂತ್ಯಕ್ರಿಯೆ ನಿನ್ನೆ ಮುಂಬೈಯ ಶಿವಾಜಿ ಪಾರ್ಕ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತ್ತು.
ಅದಕ್ಕೂ ಮುನ್ನ ಸಾವಿರಾರು ಮಂದಿ ಅವರ ಅಂತಿಮ ದರ್ಶನ ಪಡೆದಿದ್ದರು. ದೇಶದ ಪ್ರಧಾನಿ ಸೇರಿದಂತೆ ರಾಜಕೀಯ ಮುಖಂಡರು, ಚಿತ್ರರಂಗದ ಕಲಾವಿದರು, ಕ್ರಿಕೆಟ್ ದಿಗ್ಗಜರು, ಕ್ರೀಡಾಪಟುಗಳು ಹೀಗೆ ಹಲವರು ಶಿವಾಜಿ ಪಾರ್ಕ್ ಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದರು.
ಅವರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್(Sharukh Khan) ಕೂಡ ಇದ್ದರು. ಕಳೆದ ವರ್ಷ ಅಕ್ಟೋಬರ್ 2ರಂದು ಅವರ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸಿನಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿ ಬಂದ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಕಡಿಮೆಯೇ, ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಕ್ರಿಯವಾಗಿಲ್ಲ.
ನಿನ್ನೆ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ಶಿವಾಜಿ ಪಾರ್ಕ್ ಗೆ ಬಂದ ಶಾರೂಕ್ ಖಾನ್ ಎಲ್ಲರಂತೆ ಪುಷ್ಪಗುಚ್ಛವಿರಿಸಿ ಎರಡೂ ಕೈಗಳನ್ನು ಮೇಲೆತ್ತಿ ದುವಾ ಮಾಡಿದ್ದರು(ಇಸ್ಲಾಂ ಧರ್ಮದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ರೀತಿ), ಅವರ ಮ್ಯಾನೇಜರ್ ಪೂಜಾ ದದ್ಲಾನಿ(Pooja Dadlani) ಹಿಂದೂ ಸಂಪ್ರದಾಯದ ಪ್ರಕಾರ ಕೈಮುಗಿದಿದ್ದರು. ಇದು ಟ್ವಿಟ್ಟರ್, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಅದಷ್ಟೇ ಅಲ್ಲ ದುವಾ ಆದ ಬಳಿಕ ಶಾರೂಕ್ ಖಾನ್ ಮಾಸ್ಕ್ ತೆಗೆದು ಬಾಯಿಂದ ಕೆಳಗೆ ಮೃತದೇಹದ ಮೇಲೆ ಉಗುಳುವಂತೆ ವಿಡಿಯೊದಲ್ಲಿ ಕಾಣಿಸುತ್ತಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಶಾರೂಕ್ ಖಾನ್, ಲತಾ ಮಂಗೇಶ್ಕರ್ ಮೃತದೇಹದ ಮೇಲೆ ಉಗುಳಿ ಅವಮಾನ ಮಾಡಿದರೆ ಎಂಬ ಅನುಮಾನ ಕಾಡುತ್ತಿದೆ. ಬಿಜೆಪಿ ನಾಯಕರು ಶಾರೂಕ್ ಖಾನ್ ನಡೆಯನ್ನು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ(MP Ananth Kumar Hegde), ಬಾಲಿವುಡ್ ಖಾನ್ ಗಳ ದರಿದ್ರ ಮನಸ್ಥಿತಿಯೇ ಹೀಗೆ, ತಮ್ಮ ಅಸಹಜ ನಡವಳಿಕೆಯಿಂದ ದೇಶದ ಗಮನ ತಮ್ಮತ್ತ ಸೆಳೆಯುವುದು, ಪ್ರಚಾರದ ತೆವಲು. ಸಂಪ್ರದಾಯದ ಹೆಸರಿನಲ್ಲಿ ಅನಿಷ್ಟಗಳನ್ನು ಮಾಡುವುದು, ರಾಷ್ಟ್ರಧ್ವಜವನ್ನು ಹೊದಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಶವದ ಮೇಲೆ ಉಗುಳುವುದು, ಅವರ ಹೀನ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ವಾಸ್ತವ ಏನು ಎಂದು ಪರೀಕ್ಷೆ ಮಾಡಿ ನೋಡಿದಾಗ ಕೆಲವರು ಹೇಳುವುದು ಹೀಗೆ: ಇಸ್ಲಾಂ ಧರ್ಮದಲ್ಲಿ ಈ ಪದ್ಧತಿಯಿದೆಯಂತೆ. ಇಸ್ಲಾಂನಲ್ಲಿ, ದುಷ್ಟ ಶಕ್ತಿಗಳು ಅಥವಾ ‘ಸೈತಾನ’ನನ್ನು ದೂರವಿಡಲು ಹೀಗೆ ಗಾಳಿಯಲ್ಲಿ ಊದಲಾಗುತ್ತದೆ.
ಮತ್ತೊಬ್ಬರು ಟ್ವೀಟ್ ಮಾಡಿ, ಶಾರೂಕ್ ಖಾನ್ ಉಗುಳಲಿಲ್ಲ, ಅವರು ತಮ್ಮ ಧರ್ಮದ ಪ್ರಕಾರ ಲತಾ ಮಂಗೇಶ್ಕರ್ ಅವರಿಗೆ ಯಾವುದೇ ಕೆಟ್ಟದ್ದು ಆಗದಿರಲಿ ಎಂದು ಆ ರೀತಿ ಗಾಳಿಯಲ್ಲಿ ಊದಿದ್ದಾರೆ. ಜನರು ಇದನ್ನು ಒಳ್ಳೆಯ ರೀತಿಯಿಂದ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಮತ್ತೊಬ್ಬರು, ಶಾರೂಕ್ ಖಾನ್ ಲತಾ ದೀದಿ ಮೃತದೇಹದ ಮುಂದೆ ದುವಾ ಓದಿ ಮುಂದಿನ ಜೀವನದಲ್ಲಿ ರಕ್ಷಣೆ ಸಿಗಲಿ ಎಂದು ಕಳೇಬರದ ಎದುರು ಊದಿ ಉಗುಳಿದ್ದಾರೆ. ಇದರಲ್ಲಿ ಯಾವುದೇ ಅಪಾರ್ಥ, ಕೆಟ್ಟ ನಡತೆಯಿಲ್ಲ ಎಂದಿದ್ದಾರೆ. (kpc)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)