
ಅಣಲೇಬೈಲ್ ಗ್ರಾ.ಪಂ. ಸದಸ್ಯರ ಗೌರವಧನ
ಪ್ರವಾಹ ಸಂತೃಸ್ತರ ನಿಧಿಗೆ
ಸಿದ್ಧಾಪುರ ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತ್ ನ ಎಲ್ಲಾ ಸದಸ್ಯರು ತಮ್ಮ ಆಗಸ್ಟ್ ತಿಂಗಳ ಗೌರವಧನವನ್ನು ಮುಖ್ಯಮಂತ್ರಿಗಳ ಪ್ರವಾಹಸಂತೃಸ್ತರ ನಿಧಿಗೆ ನೀಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿದ ಸರ್ವಸದಸ್ಯರು ತಮ್ಮ ಒಂದು ತಿಂಗಳ ಗೌರವ ಧನವನ್ನು ಪ್ರವಾಹ ಸಂತೃಸ್ತರ ನಿಧಿಗೆ ದೇಣಿಗೆ ನೀಡುವ ನಿರ್ಣಯ ಕೈಗೊಂಡರು.

ಮಳೆನಿಂತುಹೋದಮೇಲೆ!-ಭಾಗ-02
ಕಾನಳ್ಳಿಯಲ್ಲಿ ಬೆಟ್ಟದ ಮೇಲೂ ನೀರು ಬಂತು ಅಡುಗೆ ಮನೆ ಜಗಲಿಗೆ ತಂತು!
ಸಿದ್ಧಾಪುರ ತಾಲೂಕಿನ ಕಾನಳ್ಳಿ ಬಹಳ ಕಾರಣಕ್ಕೆ ವಿಶಿಷ್ಟ. ಬೇಡ್ಕಣಿ ಗ್ರಾಮ ಪಂಚಾಯತ್ ಕಡಕೇರಿಯ ಕಾನಳ್ಳಿ ಇಲ್ಲಿಯ ಪ್ರಖ್ಯಾತ ಚೌಡೇಶ್ವರಿ ದೇವಾಲಯದಿಂದ ಪ್ರಸಿದ್ಧವಾದರೆ, ಇಲ್ಲಿರುವ ಪರಿಶಿಷ್ಟ ಜಾತಿಯ ಹಸ್ಲರರು ಶ್ರಮಜೀವಿಗಳೆಂದೇ ಖ್ಯಾತಿ.
ಸುಮಾರು 30 ಮನೆಗಳ ಈ ಪುಟ್ಟ ಹಳ್ಳಿಯಲ್ಲಿ ಸಾರ್ವಜನಿಕ ಕೆರೆ,ಕಿರಿಯ ಪ್ರಾಥಮಿಕಶಾಲೆ, ಸುವ್ಯವಸ್ಥಿತ ಸಂಪರ್ಕ ರಸ್ತೆಗಳೆಲ್ಲಾ ಇವೆ. ಇಲ್ಲಿಯ ಯುವಕರು ಜಾನಪದ, ಬುಡಕಟ್ಟು ಹಾಡುಗಳಿಂದ ರಾಜ್ಯಮಟ್ಟದಲ್ಲಿ ಹೆಸರುಮಾಡಿದ್ದಾರೆ.ಆಗಸ್ಟ್ 2 ನೇ ವಾರದ ಸುಮಾರಿಗೆ ಸಿದ್ದಾಪುರದಲ್ಲಿ 280ಮಿ.ಮೀ ಗಿಂತಲೂ ಹೆಚ್ಚು ಮಳೆ ಸುರಿಯಿತು ನೋಡಿ, ಆಗ ತಗ್ಗುಪ್ರದೇಶದ ಈ ಊರಿನ ಸಾರ್ವಜನಿಕ ರಸ್ತೆಯಲ್ಲಿ ನೀರುತುಂಬುತ್ತಿರುವುದನ್ನು ನೋಡುತಿದ್ದ ಬಹುತೇಕರಿಗೆ ತಮ್ಮ ಗುಡ್ಡದಮೇಲಿನ ಮನೆಗಳ ಒಳಗೆ ಜಲ ಬರುತ್ತಿರುವುದರ ಯಾವ ಸೂಚನೆಯೂ ಇರಲಿಲ್ಲ. ಆದರೆ 6-7 ಮನೆಗಳಲ್ಲಿ ಜಲಪುಟಿದೆದ್ದು ನೀರು ನುಗ್ಗಿತ್ತು. ಬಹುತೇಕ ಎಲ್ಲರ ಮನೆಯ ಅಡುಗೆ ಮನೆಗೆ ಕೆಸರುನೀರು, ಮಣ್ಣು ತುಂಬಿಹೋಗಿತ್ತು.
ಸರ್ಕಾರ ಗಂಜಿ ಕೇಂದ್ರ ಮಾಡಲು ಸಿದ್ಧಮಾಡುತಿದ್ದ ಸಮಯದಲ್ಲೇ ಸಮೀಪದ ಭಾನ್ಕುಳಿಮಠದಲ್ಲಿ ನಿರಾಶ್ರಿತರಿಗೆ ಸಕಲ ವ್ಯವಸ್ಥೆಗಳಿರುವ ಪ್ರಕಟಣೆ ಹೊರಬಿತ್ತು. ಮೂರ್ನಾಲ್ಕು ಕಿ.ಮೀ. ದೂರದ ಭಾನ್ಕುಳಿಗೆ ಹೋಗಲು ತಯಾರಾಗದ ಇಲ್ಲಿಯ ಜನರು ಸ್ಥಳಿಯರ ನೆರವು ಪಡೆದು ಕಾಲದೂಡಿದರು. ಮಳೆನಿಂತು ನಿರಾಳವೆನಿಸುವ ಸಮಯದಲ್ಲಿ ಮನೆಯ ಮುಂಭಾಗದ ಜಗಲಿಯಲ್ಲೇ ಅಡುಗೆ ಮಾಡುತ್ತಾ ದಿನಕಳೆದರು. ಸ್ಥಳಿಯರು, ಗ್ರಾಮಪಂಚಾಯತ್ ನೆರವಿನಿಂದ ಈ ಜನರ ದುಖ: ಕಡಿಮೆಯಾಯಿತು.ಈಗಲೂ ಇವರ ಅಡುಗೆ ಮನೆಯ ಮಣ್ಣು ತೆರವಾಗಿಲ್ಲ, ನೀರು ಹೋಗಲು ಮಾಡಿಕೊಟ್ಟ ಮನೆಯೊಳಗಿನ ನೀರುಕಾಲುವೆ ಮುಚ್ಚಿಲ್ಲ.
ಅದೇನಾಯ್ತೋ ಮಳೆಯ ರಭಸಕ್ಕೆ ಎತ್ತರದ ಮನೆ ಒಳಗೆ ಜಲ,ನೀರು ಬರತೊಡಗಿದಾಗ ಸ್ಥಳಿಯರ ಸಲಹೆಯಂತೆ ವಾಸಸ್ಥಾನ ಬದಲಿಸಿ, ಬೇರೆಕಡೆ ಆಶ್ರಯ ಪಡೆದರು, ಗ್ರಾಮಸ್ಥರು ಅವರ ನೆರವಿಗಿದ್ದುದರಿಂದ ಅವರಿಗೆ ಧೈರ್ಯ ಬಂತು ಎನ್ನುತ್ತಾರೆ ಕಾನಳ್ಳಿಯ ಯುವಕ ಗೋಪಾಲ ಹಸ್ಲರ್, ನಾವೆಂದೂ ಕಂಡರಿಯದ ಮಳೆ, ನೆರೆ ನಮ್ಮ ಗ್ರಾಮಕ್ಕೂ ನುಗ್ಗಿತ್ತು, ಗ್ರಾ.ಪಂ. ತಾಲೂಕಾ ಆಡಳಿತಗಳು ನಮ್ಮ ನೆರವಿಗೆ ಬಂದವು ಜನಪ್ರತಿನಿಧಿಗಳು ಸಂತೃಸ್ತರ ನೆರವಿಗೆ ಬಂದರು. ಬಂದ ಕಷ್ಟ,ಬಂದಂತೇ ಕರಗಿಹೋಯ್ತು ಎಂದವರು ರವಿ ಕಾನಳ್ಳಿ.
ಹೀಗೆ ಸಿದ್ದಾಪುರದ ಕಡಕೇರಿ ಕಾನಳ್ಳಿ ಈ ಶತಮಾನದಲ್ಲಿ ನೋಡಿದ ಮೊಟ್ಟಮೊದಲ ನೆರೆ, ಮಹಾಮಳೆ ಇದು. ಆದರೆ ಅಪಾಯಕ್ಕೆ ಅವಕಾಶವಾಗದಂತೆ ಆಡಳಿತಯಂತ್ರ, ಜನಪ್ರತಿನಿಧಿಗಳು, ಸರ್ಕಾರ ನೆರವಿಗೆ ಬಂದು ಅವರ ಕಷ್ಟ ದೂರ ಮಾಡಿದ್ದಾರೆ. ಬಹುತೇಕ ಕೂಲಿ ಕಾರ್ಮಿಕರು, ಪರಿಶಿಷ್ಟವರ್ಗ, ಪರಿಶಿಷ್ಟ ಜಾತಿಯವರೇ ಹೆಚ್ಚಿರುವ ಈ ಗ್ರಾಮದ ನೆರೆ,ಜಲ ಒಂದು ದುಸ್ವಪ್ನದಂತೆ ಬಂದು ಹೋಗಿದ್ದನ್ನು ನೆನೆಯುವಾಗ ಅವರ ಕಣ್ಣು, ಬಾಯಿ, ಮನಸ್ಸು ತೇವಗೊಳ್ಳುತ್ತವೆ. ಈ ಗ್ರಾಮದ ಪ್ರವಾಹ ತೊಂದರೆಯನ್ನು ಸೂಕ್ತಸಮಯದಲ್ಲಿ ಸರಿಯಾಗಿ ನಿರ್ವಹಿಸಿದ ಸಿದ್ದಾಪುರ ತಾಲೂಕಾ ಆಡಳಿತ ಮತ್ತು ಉ.ಕ.ಜಿಲ್ಲಾ ಆಡಳಿತಕ್ಕೆ ಧನ್ಯವಾದ ಹೇಳಲೇಬೇಕು.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
