![](https://i0.wp.com/samajamukhi.net/wp-content/uploads/2019/10/kangod-boori.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಮಳೆ ನಿಂತುಹೋದ ಮೇಲೆ-ಭಾಗ-06
ಇದು ಕಾನಗೋಡು ಗ್ರಾ.ಪಂ. ಮಳೆಕಹಾನಿ
ಸಿದ್ಧಾಪುರ ತಾಲೂಕಿನ ಕಾನಗೋಡು,ಶಿರಳಗಿ, ಕಾವಂಚೂರು ಪಂಚಾಯತ್ಗಳು ಅರೆಬಯಲುಸೀಮೆಯಂತಿರುವ ಭೌಗೋಲಿಕತೆಯ ಪ್ರದೇಶ. ಹಿಂದಿನ ಜಲಾನಯನ ಇಲಾಖೆ ಈಭಾಗವನ್ನು ಮಲೆನಾಡು, ಶಿರಸಿ-ಸಾಗರ ರಸ್ತೆಯ ಪಶ್ಚಿಮದ ಪಕ್ಕಾ ಮಲೆನಾಡನ್ನು ಅರೆಮಲೆನಾಡೆಂದು ವಿಭಾಗಿಸಿ ಈ ಭಾಗಕ್ಕೆ ದ್ರೋಹ ಬಗೆದಿದೆ. ಇದರ ಹಿಂದಿರುವ ಕೈಗಳಲ್ಲ, ಕೆಸರಿನ ಕಮಲಗಳು ಯಾರು ಎಂದರೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎನ್ನುವ ಸ್ಥಿತಿ.
ಕಾನಗೋಡಿನಲ್ಲಿ ಒಂದು ದೊಡ್ಡಕೆರೆ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇನ್ನೊಂದು ಕೆರೆ ಮತ್ತೊಂದು ಗದ್ದೆಬೈಲಿಗೆ ನೀರುಣಿಸುತ್ತದೆ. ಆ ಕೆರೆಯೆ ತಾವರೆಕೆರೆ. ಎರಡೆಕರೆಯ ಈ ತಾವರೆಕೆರೆ ಈ ಮಳೆಗಾಲದಲ್ಲಿ ಒಳಗೊಳಗೇ ಅಸರಿದೆ. ಅದರ ಬಂಡು,ಚಾನೆಲ್ ಬಾಯಿಗಳೆಲ್ಲಾ ಕಿತ್ತು ನೀರು ಹೊರಹೋಗಿದೆ. ಈ ಬೃಹತ್ ಪ್ರಮಾಣದ ನೀರು ತುಂಬಿ, ಒಳಗೊಳಗೆ ಅಸರಿ ಹೋಗದಿದ್ದರೆ ಈ ಕೆರೆ ಒಡೆದು ನೂರಾರು ಎಕರೆ ಕೃಷಿಭೂಮಿ ಹಾಳಾಗುತಿತ್ತು. ಇದು ಮೇಲಿನ ಕೆರೆಯ ಕತೆಯಾದರೆ, ಊರಹೊರಗಿನ ದೊಡ್ಡಕೆರೆ ಅಥವಾ ಮಾರಿಕೆರೆ ಈ ಭಾಗದ ಪ್ರಮುಖ ಜಲಮೂಲ.
ಈ ಕೆರೆಯ ಬಂಡು ಒಡೆದಂತಾಗಿ ನೀರು ಹೊರಹೋಗದಿದ್ದರೆ ಈ ಕೆರೆಯ ನೀರು ಸಾವಿರಾರು ಎಕರೆ ಕೃಷಿ ಭೂಮಿಯನ್ನೇ ಕೊಚ್ಚಿಕೊಂಡು ಹೋಗುತಿತ್ತು. ಈ ಕೆರೆಗಳಿಗೆ ಮುಂದಿನ ಮಳೆಗಾಲದ ಮೊದಲು ಅಗತ್ಯ ದುರಸ್ಥಿ-ಕೆರೆಕಟ್ಟುವ ಕಾಮಗಾರಿ ಮಾಡಬೇಕು ಎಂಬುದು ಈ ಗ್ರಾಮದ ಜನರ ಬೇಡಿಕೆ.
ಭಾವಿಗಳು ಕುಸಿದವು- ಈ ವರ್ಷದ ಮಹಾಮಳೆಗೆ ಸಿದ್ದಾಪುರ ತಾಲೂಕು ಉತ್ತರಕನ್ನಡ ಜಿಲ್ಲೆಯ ಬಹಳ ಕಡೆ ತೆರೆದ ಬಾವಿಗಳು ಮುಚ್ಚಿವೆ. ಆದರೆ ಇಲ್ಲಿಯ ಗಣೇಶ್ ನಗರದಲ್ಲಿ ಎರಡ್ಮೂರು ಬಾವಿಗಳು ಕುಸಿದಿವೆ. ನೀರು ಎತ್ತಲು ಭಯ ಪಡುವಂತಾದ ದುಸ್ಥಿತಿಯಲ್ಲಿ ಇಲ್ಲಿಯ ಜನರು ಈ ಭಾವಿಗಳ ನೀರು ಎತ್ತುತಿದ್ದಾರೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿ ಕಿರಿದು, ಇಲ್ಲಿ ಸಂಪರ್ಕ ರಸ್ತೆಗಳು ವ್ಯವಸ್ಥಿತವಾಗಿಲ್ಲ. ಕಾನಗೋಡು, ಐಗೋಡು, ಮಂಕೋಡು,ಹಳ್ಳಿಬೈಲ್ ಸೇರಿದಂತೆ ಇಲ್ಲಿಯ ಬಹುತೇಕ ರಸ್ತೆಗಳೆಲ್ಲಾ ಕೆಸರುಗುಂಡಿಗಳಂತಾಗಿವೆ. ಈ ರಸ್ತೆಗಳ ಉನ್ನತೀಕರಣಕ್ಕೆ ಅನುದಾನದ ಕೊರತೆ ಇದೆ ಎನ್ನುತ್ತಾರೆ ಗ್ರಾ.ಪಂ. ಮುಖಂಡ ಎಚ್.ಕೆ. ಶಿವಾನಂದ.
ಕಾನಗೋಡಿನ ಶಾಲೆ, ಅಂಗನವಾಡಿಗಳಿಗೆ ವ್ಯವಸ್ಥಿತ ಕಟ್ಟಡಗಳಿಲ್ಲ, ಮಹಾಮಳೆಯಲ್ಲಿ ಇರುವ ಒಂದೆರಡು ಕೊಠಡಿಗಳೂ ಬಳಕೆಗೆ ಅಯೋಗ್ಯವಾಗಿವೆ. ಇದೇ ಪಂಚಾಯತ್ ನ ವಡಗೇರಿಯಲ್ಲಿ ಮಾಜಿ ಶಾಸಕ ಗೋಪಾಲಕಾನಡೆಯವರು ದಾನವಾಗಿ ನೀಡಿದ ಪ್ರದೇಶದಲ್ಲಿ ಹೊಸ ಶಾಲೆ ಪ್ರಾರಂಭವಾಗಿದೆ. ಆದರೆ ಅಲ್ಲಿ ಕೊಠಡಿಗಳ ಕೊರತೆ. ಈ ಕೊರತೆ ನೀಗಿಸಲು ಹಳೆಶಾಲೆಯ ಒಂದೆರಡು ಕೊಠಡಿ ಬಳಸಿಕೊಳ್ಳಲಾಗುತಿತ್ತು ಆದರೆ ಮಳೆಯ ನಂತರ ಆ ಶಾಲೆ ಕುಸಿಯುವ ಅಪಾಯ ಎದುರಿಸುತ್ತಿದೆ. ಇದೇ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಗೆ ಕನಿಷ್ಟ ಎರಡು ಹೆಚ್ಚುವರಿ ಕೊಠಡಿಗಳು ಬೇಕು ಎನ್ನುವುದು ಅಲ್ಲಿಯ ಅನಿವಾರ್ಯ ಬೇಡಿಕೆ.
ಈ ಮಳೆಗಾಲದಲ್ಲಿ ಇಲ್ಲಿಯ ಬಳ್ಳಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅದೃಷ್ಟ ನೆಟ್ಟಗಿಲ್ಲದಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಜಿಲ್ಲಾಧಿಕಾರಿಗಳ ಮುಂಜಾಗ್ರತಾ ಕ್ರಮದಿಂದ ಇಲ್ಲಿ ಆಗಬಹುದಾಗಿದ್ದ ಸಂಭವನೀಯ ಅನಾಹುತ ತಪ್ಪಿದ ಖುಷಿಯಿದೆ. ಒಂದು ದಿನದ ಮಳೆಗೆ ಈ ಶಾಲೆಯ ಚಾವಣಿ ಮುರಿದು ಹೆಂಚುಗಳು ನೆಲಕ್ಕುರುಳಿದವು. ಈಗ ಈ ಶಾಲೆಯಲ್ಲಿ ಒಂದು ಕೊಠಡಿಯಲ್ಲಿ ಎರಡೆರಡು ತರಗತಿ ನಡೆಯುವ ಅನಿವಾರ್ಯತೆ. ಈ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲೇಬೇಕಾದ ಅನಿವಾರ್ಯತೆ ಇಲ್ಲಿ ಎದುರಾಗಿದೆ.
ವಿವಾದಿತ ಜಕ್ರಗುಂಡಿ ಹೊಳೆಯಲ್ಲಿ ನೀರು ಹರಿದಿದೆ. ಕಾನಗೋಡು ಗ್ರಾಮ ಪಂಚಾಯತ್ ಮಳೆಗೆ ಬೆಚ್ಚಿದೆ. ಮೋದಿಯವರ ಸಂಸದರ ಮಾದರಿ ಗ್ರಾಮ ಎಂಬ ಹುಸಿ ಘೋಷಣೆಯ ನಾಟಕದ ಮಾತಿಗೆ ಮರುಳಾದ ಇಲ್ಲಿಯ ಜನ ಸಂಸದನೂ ಇಲ್ಲ, ಅವನ ಆದರ್ಶವೂ ಇಲ್ಲ, ಆದರ್ಶ ಗ್ರಾಮವೂ ಇಲ್ಲ. ಬಿ.ಜೆ.ಪಿ. ಅಧಿಕಾರದಾಹಿ ರಾಜಕಾರಣದ ನಾಟಕಕ್ಕೆ ಬಲಿಯಾದ ಸಂಸದರ ಮಾದರಿ ಗ್ರಾಮಗಳ ವಾಸ್ತವಸ್ಥಿತಿ ನೋಡಬೇಕೆಂದರೆ ಆಮೋದಿ,ಈ ಯಡಿಯೂರಪ್ಪನೇ ಇಲ್ಲಿಗೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇಲ್ಲಿಯ ಸ್ಥಳಿಯರು.
ಅಂದಹಾಗೆ ಸಂಸದರ ಈ ಆದರ್ಶ!ಗ್ರಾಮದಲ್ಲಿ ಕೆರೆ ಒಡೆದು,ಭಾವಿಗಳು ಕುಸಿದು, ರಸ್ತೆ, ಶಾಲೆ, ಜನಜೀವನ ಮೂರಾಬಟ್ಟೆಯಾದರೂ ಸಂಸದರ ಪತ್ತೆ ಇಲ್ಲ. ನಮ್ಮ ಸಂಸದರು, ಶಾಸಕರನ್ನು ನಾವು ಹಗಲಲ್ಲೂ ಬ್ಯಾಟರಿ ಹಿಡಿದು ಹುಡುಕಬೇಕಿದೆ ಎನ್ನುವ ಈ ಸ್ಥಳಿಯರ ವ್ಯಂಗ್ಯ ಇಲ್ಲಿಯ ಸಂಸದರು, ಶಾಸಕರ ಜನಸ್ಫಂದನಕ್ಕೆ ಉತ್ತಮ ದೃಷ್ಟಾಂತ.
![](https://i2.wp.com/samajamukhi.net/wp-content/uploads/2019/08/20190824_141445.jpg?fit=1024%2C768)
![](https://i0.wp.com/samajamukhi.net/wp-content/uploads/2019/08/20190824_123656.jpg?fit=1024%2C768)
![](https://i2.wp.com/samajamukhi.net/wp-content/uploads/2019/08/20190824_122628.jpg?fit=1024%2C768)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)