![](https://i0.wp.com/samajamukhi.net/wp-content/uploads/2019/08/honnemaradu-swamy.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಪ್ರಕೃತಿ,ಅರಣ್ಯ, ನೀರು ಇರುವ ಪ್ರದೇಶಗಳೆಂದರೆ ಪ್ರವಾಸಿಗರಿಗೆ ಮೆಚ್ಚಿನ ಸ್ಥಳ. ಪಿಕ್ ನಿಕ್, ಟೂರ್ ಹೋಗುವವರ ಆಯ್ಕೆ ಕೂಡಾ ನೈಸರ್ಗಿಕ ಆಕರ್ಷಣೆಗಳೇ ಹೆಚ್ಚಿರುವುದು ಸಾಮಾನ್ಯ. ಇಂಥ ಸ್ಥಳಗಳಲ್ಲಿ ಪ್ರವಾಸಿಗರು ಬಂದು ಅಲ್ಲಿಯ ವಾತಾವರಣ ಕಲುಷಿತ ಮಾಡುತ್ತಿರುವುದಕ್ಕೆ ನೂರಾರು ದೃಷ್ಟಾಂತಗಳು ದೊರೆಯುತ್ತವೆ.ಆದರೆ ನೀವಿಲ್ಲಿ ನೋಡುತ್ತಿರುವ ಹೊನ್ನೆಮರಡು ಇವಕ್ಕೆಲ್ಲಾ ಅಪವಾದ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದ ಈ ಹಿನ್ನೀರಿನ ಪ್ರದೇಶ ವಾಸ್ತವದಲ್ಲಿ ಸ್ವರ್ಗ ಸದೃಶ ಎಂದರೆ ಉತ್ಪ್ರೇಕ್ಷೆಯಲ್ಲ. ಇಲ್ಲಿರುವ ಹಿನ್ನೀರು ಸೃಷ್ಟಿಸಿರುವ ಕಾಡುದ್ವೀಪಗಳು,ಹಿನ್ನೀರಿನ ಅಲೆಗಳ ಮೊರೆತ ಎಂಥವರಲ್ಲೂ ರಸಿಕತ್ವ, ಕವಿತ್ವವನ್ನು ಎಚ್ಚರಿಸದೆ ಇರದು.
ಇಷ್ಟು ನೈಸರ್ಗಿಕ, ಸುಂದರ,ರಮಣೀಯ ಪ್ರದೇಶವೆಂದರೆ ಇಲ್ಲಿ ಪ್ರವಾಸಿಗರ ದಂಡು ಸಾಮಾನ್ಯ, ಬೇರೆ ಪ್ರದೇಶಗಳಂತೆ ಇಲ್ಲಿಯೂ ಪ್ರವಾಸಿಗರ ಆಟಾಟೋಪ ಎಂದುಕೊಂಡರೆ ನಿಮ್ಮ ಅಭಿಪ್ರಾಯ, ಪೂರ್ವಾಗ್ರಹ ತಪ್ಪು ಯಾಕೆಂದರೆ ಇಲ್ಲಿ ನೀವು ಪ್ಲಾಸ್ಟಿಕ್, ಗಾಜು ಇತರ ಮಲಿನ ವಸ್ತುಗಳನ್ನು ಕಾಣಲು ಸಾಧ್ಯವಿಲ್ಲ.
ಈ ಪ್ರಕೃತಿ ಸೊಬಗಿನಲ್ಲಿ ಭಾರತೀಯ ಸಾಹಸ ಸಮನ್ವಯ ಕೇಂದ್ರ ನಡೆಸುವ ದಂಪತಿಗಳು ಈ ಪ್ರದೇಶದಲ್ಲಿ ಪ್ರವಾಸಿಗರು ತೊಂದರೆ ಮಾಡದಂತೆ, ಮಾಲಿನ್ಯ ಮಾಡದಂತೆ ತಡೆದಿದ್ದಾರೆ.
ವರ್ಷದಲ್ಲಿ ಹಲವು ಬಾರಿ ಇಲ್ಲಿ ಜಲಸಾಹಸ ಕ್ರೀಡೆ,ನೆಲ-ಜಲಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಸಂಯೋಜಿಸುವ ಭಾರತೀಯ ಸಾಹಸ ಸಮನ್ವಯ ಕೇಂದ್ರ ಉಳಿದ ಅವಧಿಯಲ್ಲಿ ಇಲ್ಲಿ ಪ್ರವಾಸಿಗರ ಆಟಾಟೋಪ ನಿಯಂತ್ರಿಸುತ್ತದೆ. ಹೊರ ಪ್ರದೇಶದಿಂದ ಬರುವವರು, ಸ್ಥಳಿಯರಿಗೆ ಇಲ್ಲಿಯ ಪ್ರಕೃತಿಯಲ್ಲಿ ಅನುಚಿತ ಕೆಲಸ, ನಡವಳಿಕೆ ನಡೆಸದಂತೆ ಎಚ್ಚರಿಕೆ ನೀಡುವ ಸಂಸ್ಥೆಯ ಸಿಬ್ಬಂದಿಗಳು ಈ ಪ್ರದೇಶವನ್ನು ಉತ್ತಮ ನಿಸರ್ಗವನ್ನಾಗಿ ಕಾಪಾ ಡಿಕೊಂಡು ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಈ ಹೊನ್ನೆಮರಡುರಾಷ್ಟ್ರ, ಅಂತರಾಷ್ಟೀಯ ನಿಸರ್ಗ ಪ್ರೀಯರನ್ನು ಆಕರ್ಷಿಸುತ್ತಿದೆ. ಹೊರ ಪ್ರದೇಶದ ಪ್ರವಾಸಿಗರು ಈ ಸೊಬಗಿಗೆ ಮನಸೋತರೆ, ಸ್ಥಳೀಯರು ಇಲ್ಲಿಯ ಸಹಜತೆಗೆ ಬೆರಗಾಗುತ್ತಾರೆ. ಪ್ರವಾಸಿಗರಿಗೆ ಇದು ನೈಸರ್ಗಿಕ ಅದ್ಭುತವಾದರೆ ಇದನ್ನು ಸಹಜವಾಗಿ ಉಳಿಸಿದ ನೊಮಿಟೋ ಮತ್ತು ಸ್ವಾಮಿ ದಂಪತಿಗಳಿಗೆ ಇಲ್ಲಿಯ ಸರಳತೆ, ಸಹಜತೆಯ ನೈಸರ್ಗಿಕ ವಾತಾವರಣ ಕಾಯುವುದು ಬದ್ಧತೆ ಮತ್ತು ವೃತ.
ರಾಜ್ಯದ ಸುಂದರ ಪ್ರವಾಸಿ ತಾಣವನ್ನು ನೈಸರ್ಗಿಕವಾಗಿ ಉಳಿಸಿದ ಭಾರತೀಯ ಸಾಹಸ ಸಮನ್ವಯ ಕೇಂದ್ರಕ್ಕೆ ನೀವೂ ಕೂಡಾ ಧನ್ಯವಾದ ಹೇಳದೆ ಉಳಿಯಲಾರಿರಿ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)