

‘1977 ರಲ್ಲಿ ಕ್ರಾಂತಿಕಾರಿ ಕವಿಗಳಿಗೆ ತಿಳಿಯಿತು -ಕಾವ್ಯ ಎಷ್ಟೇ ಪ್ರಯತ್ನಿಸಿದರೂ ಕ್ರಾಂತಿ ಮಾಡುವುದು ಕಷ್ಟ. ಬಸವರಾಜ ಎಂಬ ಮಂಡ್ಯದ ಹುಡುಗನಿದ್ದ; ಒಕ್ಕಲಿಗರ ಹುಡುಗನೀತ; ಸದಾ ಕಷ್ಟದಲ್ಲಿರುತ್ತಿದ್ದ ಈತ ಕ್ರಾಂತಿಕಾರಿ. ವ್ಯವಸ್ಥೆ ಮತ್ತು ಶೋಷಕರ ವಿರುದ್ಧ ಎಲ್ಲೇ ಪ್ರತಿಭಟನೆ, ಧರಣಿ, ಸಭೆ ನಡೆದರೂ ಅಲ್ಲಿರುತ್ತಿದ್ದ. ನನಗೆ ತುಂಬ ಹತ್ತಿರದವನು ಈತ. ಇವನು ಬಳಲಿ, ಮೈಯಲ್ಲಿ ಹನಿ ರಕ್ತವಿಲ್ಲದೆ, ಉಣ್ಣಲು ಅನ್ನವಿಲ್ಲದೆ ದಿಕ್ಕೆಟ್ಟು ನನ್ನನ್ನು ನೋಡುತ್ತಿದ್ದಾಗ ನಾನು ಅವನನ್ನು ಕೇಳುತ್ತಿದ್ದುದು ‘ಏನಾದರೂ ಕೆಲಸ ಸಿಕ್ಕಿತಾ, ಏನಾದರೂ ವ್ಯವಸ್ಥೆ ಮಾಡಿಕೊಂಡಿದ್ದೀಯಾ?’ ಎಂದು; ಅವನನ್ನು ಎಂದೂ, ‘ಇನ್ನಷ್ಟು ಕ್ರಾಂತಿಕಾರಕವಾಗಿ ಹೋರಾಡು’ ಎಂದು ಪ್ರೋತ್ಸಾಹಿಸುತ್ತಿರಲಿಲ್ಲ.

ಈ ಅಮಾಯಕ ಬಸವರಾಜ ತುರ್ತು ಪರಿಸ್ಥಿತಿಯಲ್ಲಿ (1975-77 ರಲ್ಲಿ) ಯಾರೋ ಪೊಲೀಸರೊಂದಿಗೆ ಜಗಳ ಆಡಿರಬೇಕು. ಅವನ ಹೆಣ ರೈಲು ಕಂಬಿಗಳ ಮೇಲೆ ಬಿದ್ದಿತ್ತು. ತುರ್ತು ಪರಿಸ್ಥಿತಿ ಮುಗಿದ ಮೇಲೆ ಕೂಡ ಯಾರೂ ಈ ಬಗ್ಗೆ ವಿಚಾರಣೆಯಾಗಬೇಕು ಎಂದು ಒತ್ತಾಯಿಸಲಿಲ್ಲ. ನಾವೆಲ್ಲ ಯಥಾಪ್ರಕಾರ ಭಾಷಣ ಮಾಡಿದೆವು. ಹೇಳಿಕೆ ಕೊಟ್ಟೆವು, ಬಸವರಾಜನನ್ನು ಹೊಗಳಿದೆವು. ಕೋಪ ತೀರಾ ಉಲ್ಬಣಿಸಿದಾಗ ಪದ್ಯ ಬರೆದೆವು!1977 ರ ಫೆಬ್ರವರಿ ತಿಂಗಳಲ್ಲಿ ಪ್ರಕಟವಾದ ‘ಕಪ್ಪು ಜನರ ಕೆಂಪು ಕಾವ್ಯ’ ಈ ಪುಸ್ತಕ ನೋಡಿದಾಗ ಇನ್ನೊಂದು ನೆನಪು. ‘ಕಪ್ಪು ಜನ’ ಎನ್ನುವುದು ಶೋಷಣೆಗೊಳಗಾದ ದಲಿತರು, ಹಿಂದುಳಿದವರು. ‘ಕೆಂಪು’ ಎನ್ನುವುದು ಕೋಪ, ರಕ್ತ, ಕ್ರಾಂತಿ- ಇದಕ್ಕೆಲ್ಲ ಸಂಕೇತ. ನಾವೆಲ್ಲ ಲೇಖಕರಾಗಿ ಬೆಳೆದದ್ದು ಈ ವೇಳೆಯಲ್ಲಿ; ಪದ್ಯ ಅಥವಾ ಕತೆ ನೇರವಾಗಿ ಕ್ರಾಂತಿ ಮಾಡಲಾರವು; ಕಪ್ಪು ಶೋಷಿತ ಜನರಿಗೆ ಎಲ್ಲರಿಗಿಂತ ಹೆಚ್ಚಾಗಿ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ, ಪ್ರತಿಭಟನಾ ಸ್ವಾತಂತ್ರ್ಯ ಬೇಕು; ಬುದ್ದಿಜೀವಿಗಳಿಗಿಂತಲೂ ನೊಂದ ಜನರಿಗೆ ವಾಕ್ ಸ್ವಾತಂತ್ರ್ಯ ಬೇಕು; ತೀರಾ ಕ್ರಾಂತಿಕಾರರಾಗಿ ಎಗರಾಡುವ ಜನ ಸಮಯ ಸಿಕ್ಕೊಡನೆ ಶೋಷಿಸುವ ಖದೀಮರು ಅಥವಾ ಹುಚ್ಚರು ಆಗುತ್ತಾರೆ; ಮಾತಿನ ಕ್ರಾಂತಿ ನಿಜವಾದ ಕ್ರಾಂತಿಗೆ ದಾರಿ ಮಾಡಿಕೊಡುವ ಬದಲು ಕೆಟ್ಟವರು ಮುಂದೆ ಬರಲು ಸಹಾಯಕವಾಗಿದೆ.
ಮನುಷ್ಯ ತ್ಯಾಗ ಮಾಡಿದಷ್ಟೂ ಲಾಭ ನಿರೀಕ್ಷಿತೊಡಗುತ್ತಾನೆ- ತುರ್ತು ಪರಿಸ್ಥಿತಿಯಲ್ಲಿ ಜೈಲಲ್ಲಿದ್ದ ಕೆಲವರು ಖದೀಮರು ಈಗ ಏನಾಗಿದ್ದಾರೆ ನೋಡಿ.!ಆಗ ಈ ‘ಕಪ್ಪು ಜನರ ಕೆಂಪು ಕಾವ್ಯ’ ಪುಸ್ತಕಕ್ಕೆ ಚಿತ್ರ ಬರೆದವರು, ಮುನ್ನುಡಿ ಬರೆದವರು, ರಕ್ತಸಿಕ್ತ ಪದ್ಯ ಬರೆದವರು ಈಗ ಏನಾಗಿದ್ದಾರೆ ಎಂದು ಹೇಳುವುದಿಲ್ಲ, ಅದು ಈಗ ಬೇಡ. ಆ ಪುಸ್ತಕದಲ್ಲಿ ಹಿನ್ನುಡಿ ರೂಪದ ನನ್ನದೊಂದು ಕವನವಿದೆ. ಹೋರಾಡುವುದಕ್ಕೆ ಬದಲು ನಾವೆಲ್ಲ ಕವನ ಬರೆಯುವುದನ್ನು ನೋಡಿ ಬರೆದದ್ದು;ಆತ್ಮೀಯರೇನಿಮ್ಮ ಕವನಗಳು ತಲುಪಿವೆನಮ್ಮ ಜನಕ್ಕೆ ತಲುಪುತ್ತವೆಯೋ ಎಂಬ ಬಗ್ಗೆನನಗೆ ಅನುಮಾನವಿದೆ- ಕವನವಲ್ಲಕತ್ತಿ ಕೂಡಾ ತಲುಪದ ಸ್ಥಿತಿ ಈ ಜನರದ್ದು. ನಾವು ನೀವು ಹೀಗೆ ಕವನಗಳಲ್ಲಿಕಸರತ್ತು ಮಾಡಲುಎಂಥ ತಪ್ಪನ್ನೂ ಮಾಡಿರಲಿಲ್ಲ.ಸುಳ್ಳುಗಳನ್ನು ನಾಚಿಕೆಬಿಟ್ಟು ಹೇಳಿಸುಳ್ಳುಗಳ ದಲಿತೋದ್ಧಾರ ಮಾಡಿಕಳ್ಳತನದ ಲಾಭವನ್ನು ಎಂದೂ ಗುಟ್ಟಾಗಿ ಹಂಚಿಕೊಂಡು ತಿಂದಿರಲಿಲ್ಲ.ಕೊನೆಗೂ ಕಾವ್ಯದ ಹೆಣ್ಣಿನ ತೊಡೆಯಲ್ಲಿಅವಮಾನದ ಮುಖವನ್ನಿಟ್ಟುಅಳಬೇಕಾದ ಸ್ಥಿತಿ ಬಂದೀತೆಂದುನಾನಂತೂ ಬಗೆದಿರಲಿಲ್ಲ.ಗಾಳಿ ಕೊಂಚ ಗಾಳಿಯ ಗುಣ ಕಳೆದುಕೊಂಡುನೀರು ಕೊಂಚ ನೀರಿನ ಗುಣ ಕಳೆದುಕೊಂಡುನೆಲ ತನ್ನ ಸೈರಣೆ ಕಳೆದುಕೊಂಡುಸ್ತಬ್ಧವಾಗಿದ್ದಾಗ;ಈ ಕವನ ಸಂಕಲನಕೆಲವರ ಕಿವಿಯಲ್ಲಾದರೂಜೀವ ಬರಿಸಿದರೆಅಷ್ಟೇ ಸಾಕು…-
ಪಿ. ಲಂಕೇಶ್ಕೃಪೆ: -ಮರೆಯುವ ಮುನ್ನ (ಸಂಗ್ರಹ-3, 2011)PC : Sridhar
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
