

ಭಾನುವಾರ ಮಧ್ಯ ರಾತ್ರಿಯ ವರೆಗೆ ಸಿದ್ಧಾಪುರ ಪೊಲೀಸ್ ಠಾಣೆ ಗಿಜಿಗುಡುತಿತ್ತು. ಅನೇಕರಿಗೆ ಲಾಠಿ ಚಾರ್ಜ್ ಆಗಬಹುದೆನ್ನುವ ಅನುಮಾನ ಮೂಡಿತ್ತು. ಠಾಣಾಧಿಕಾರಿಗಳು ಸುಮ್ಮನೆ ಕೂತಿದ್ದರು. ಹಿರಿಯ ಅಧಿಕಾರಿಗಳೆದುರು ರಾಜಕೀಯ ವೈರಿಗಳಾದ ವಸಂತ ನಾಯ್ಕ ಮತ್ತು ಕೆ.ಜಿ.ನಾಯ್ಕ ಹಣಜಿಬೈಲ್ ಅಬ್ಬರಿಸುತಿದ್ದರು. ಸಿದ್ಧಾಪುರ ಅದೆಷ್ಟನೆ ಬಾರಿ ಹೀಗೆ ದಿಗ್ಗನೆ ಎದ್ದು ಕೂತಿದೆಯೋ? ಲೆಕ್ಕವಿಟ್ಟವರ್ಯಾರು?

ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ನಾಯಕರು ಸೇರಿ ಪೊಲೀಸರ ವಿರುದ್ಧ ಮಾತನಾಡಲು ಕಾರಣವಾಗಿದ್ದು ಸಣ್ಣ ಪ್ರಕರಣವಾದರೂ ಅದರ ಹಿಂದೆ ಕಾಗೇರಿ ಮುಖವಿತ್ತು.! ಹೀಗೆ ಸೋಮುವಾರದ ಪ್ರಕರಣದ ಬಗ್ಗೆ ಹಾದಿ-ಬೀದಿಗಳಲ್ಲೆಲ್ಲಾ ಚರ್ಚೆಯಾಗುತ್ತಿದೆ.
ಅಸಲಿಗೆ ಆದ್ದೇನು?
ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ನಾಯ್ಕ ಮತ್ತು ಬಿ.ಜೆ.ಪಿ ಯುವ ಘಟಕದ ಅಧ್ಯಕ್ಷ ಹರೀಶ್ ಗೌಡರ್ ಒಂದೇ ಕಾರಿನಲ್ಲಿ ಪ್ರಯಾಣಿಸುತಿದ್ದಾಗ ಚಿಕ್ಕ ಅಪಘಾತವಾಗಿದೆ. ಈ ಅಪಘಾತದ ವಿಚಾರದಲ್ಲಿ ಎದುರುದಾರರಾದ ಜೋಸೆಫ್ ಮತ್ತು ಅನಿಲ್ ಜೊತೆಗೆ ಯುವಘಟಕದ ಅಧ್ಯಕ್ಷರ ಜಗಳ ನಡೆದಿದೆ. ಇಷ್ಟೇ ಆಗಿದ್ದರೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಲೇ ಇರಲಿಲ್ಲ ಆದರೆ ಆದದ್ದೇ ಬೇರೆ. ಶನಿವಾರದ ಚಿಕ್ಕ ಅಪಘಾತ ಮುಗಿದು ಹೋಗಿದೆ ಆದರೆ ಪರಸ್ಫರ ಡಿಕ್ಕಿ ಮಾಡಿಕೊಂಡ ಕಾರ್ ಸವಾರರು ಸುಮ್ಮನಿದ್ದಾಗ ರಾಜಕೀಯ ಪ್ರವೇಶವಾಗಿದೆ. ತಾಲೂಕಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರು, ಕಾಂಗ್ರೆಸ್ ನಾಯಕರ ಬಗ್ಗೆ ಸ್ಫೀಕರ್ ಕಾಗೇರಿಯವರಿಗೆ ಯಾವಾಗಲೂ ತಕರಾರು ಆದರೆ ಅವರ ಪಿತ್ತ ನೆತ್ತಿಗೇರುವಂತಾಗಿದ್ದು ಬಿ.ಜೆ.ಪಿ. ಯುವ ಘಟಕದ ಅಧ್ಯಕ್ಷ ಹರೀಶ್ ಗೌಡರ್ ಅವರ ಜೊತೆಗಿದ್ದುದು.
ಇದಕ್ಕಿಂತ ಹೆಚ್ಚಾಗಿ ಹರೀಶ್ ಗೌಡ ಬಿ.ಜೆ.ಪಿ.ಯ ಆರೆಸ್ಸೆಸ್ ಬಣ ಕಾಗೇರಿ ಶಿಷ್ಯರೊಂದಿಗಿಲ್ಲ. ಬಿ.ಜೆ.ಪಿ. ಬಂಡಾಯ ಬಣ ಕೆ.ಜಿ.ನಾಯ್ಕ ಹಣಜಿಬೈಲ್ ರೊಂದಿಗೆ ಗುರುತಿಸಿಕೊಂಡಿರುವ ಹರೀಶ್ ಗೌಡರ್ ರೆಬೆಲ್ ಯುವಕ. ಬಿ.ಜೆ.ಪಿ.ಯ ಸಂಘನಿಷ್ಠರ ಕುತಂತ್ರದ ರಾಜಕೀಯದಿಂದ ಬೇಸತ್ತ ಕೆ.ಜಿ.ನಾಯ್ಕ ನೇತೃತ್ವದ ತಂಡ ಬಿ.ಜೆ.ಪಿ.ಯ ಕಾಗೇರಿ ಜೊತೆಗೆ ಅಂತರ ಕಾಪಾಡಿಕೊಂಡಿದೆ. ಬಿ.ಜೆ.ಪಿ.ಯ ಯಾವುದೇ ಕಾರ್ಯಕ್ರಮದಲ್ಲಿ ನೂರಾರು ಜನ ಕಾಣುವುದೇ ದುಸ್ತರವಾಗಿರುವ ಸಮಯದಲ್ಲಿ ಕೆ.ಜಿ.ಬಣ ಬಿ.ಜೆ.ಪಿ. ಹಿಂದುಳಿ ದ ವರ್ಗಗಳ ಸಮಾವೇಶದಲ್ಲಿ ಸಾವಿರಾರು ಜನ ಸೇರಿಸಿತು ನೋಡಿ. ಈ ಕಾರ್ಯಕ್ರಮದ ಫಲಿತಾಂಶವೇ ಕಾಗೇರಿ ಸಿಟ್ಟಿಗೆ ಕಾರಣ.
ಕಳೆದ ವಾರ ಸಿದ್ದಾಪುರದಲ್ಲಿ ನಡೆದ ಬಿ.ಜೆ.ಪಿ. ಹಿಂದುಳಿದ ವರ್ಗಗಳ ಕಾರ್ಯಕ್ರಮದಲ್ಲಿ ನೇರ ದಾಳಿಯಿಂದ ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದ ವಿಧಾನಸಭಾ ಅಧ್ಯಕ್ಷ ಕಾಗೇರಿ ಆ ಕಾರ್ಯಕ್ರಮ ವಿಫಲ ಮಾಡಲು ಶ್ರಮಿಸಿದ್ದರಂತೆ ತಮ್ಮ ಪುರೋಹಿತಶಾಹಿ ಲೆಕ್ಕಾಚಾರದ ಕುತಂತ್ರ-ತಂತ್ರಗಳಿಗೆ ಸೆಡ್ಡು ಹೊಡೆದು ಕಾರ್ಯಕ್ರಮ ಮಾಡಿ ಗೆದ್ದ ಕೆ.ಜಿ.ಬಣವನ್ನು ಅಧಿಕಾರದಿಂದ ಪಳಗಿಸಲು ಕಾಗೇರಿ ಪ್ರಯತ್ನಿಸುತಿದ್ದಾರಂತೆ! ಇದರ ಪರಿಣಾಮವೇ ಸಿದ್ಧಾಪುರದ ದಲಿತ ದೌರ್ಜನ್ಯ ಪ್ರಕರಣ ಮತ್ತು ತಡರಾತ್ರಿಯ ಮುತ್ತಿಗೆ ಎನ್ನಲಾಗುತ್ತಿದೆ.
ಚಿಕ್ಕ ಅಪಘಾತದ ಪ್ರಕರಣವನ್ನು ಪರಿಶಿ ಷ್ಟರ ದೌರ್ಜನ್ಯ ಕಾಯಿದೆ ಅಡಿ ದಾಖಲಿಸಿದ ಸಿದ್ಧಾಪುರ ಪೊಲೀಸರು ಹರೀಶ್ ಗೌಡರ್ ಜೊತೆಗೆ ಕೆಲವು ಯುವ ಕಾಂಗ್ರೆಸ್ ಪ್ರಮುಖರನ್ನು ಜೈಲಿಗೆ ಕಳುಹಿಸುವ ತಯಾರಿ ನಡೆಸಿದ್ದಾರೆ. ಹೊಂದಾಣಿಕೆ,ವಿಶ್ವಾಸದಿಂದಲೇ ಆರೋಪಿತ ಯುವಕರನ್ನು ಕರೆಸಿಕೊಂಡ ಪೊಲೀಸರು ದಿಢೀರನೇ ಪ್ರಕರಣ ದಾಖಲಿಸಿದ್ದರಿಂದ ಸಿಟ್ಟಿಗೆದ್ದ ಕೆ.ಜಿ.ನಾಯ್ಕ ಮತ್ತು ವಸಂತನಾಯ್ಕರೊಂದಿಗೆ ರವಿವಾರ ರಾತ್ರಿ ನೂರಾರು ಜನರು ಸೇರಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ದುಡುಕಿರುವುದು, ದಿಢೀರನೇ ಪ್ರಕರಣ ದಾಖಲಿಸಿರುವುದು ಎಲ್ಲವೂ ಅನುಮಾನ, ಸಂಶಯಕ್ಕೆಡೆ ಮಾಡಿದೆ. ಶಾಸಕರ ಪರೋಕ್ಷ ತಂತ್ರದ ಈ ಪ್ರಕರಣದಲ್ಲಿ ಹರೀಶ್ ಗೌಡರನ್ನು ಸಿಲುಕಿಸಿ ತೊಂದರೆ ಮಾಡುವುದುಕೆಲವು ಹಿತಾಸಕ್ತರ ಉದ್ದೇಶ. ಸಂಶಯ, ಅನುಮಾನಗಳ ಪ್ರಕಾರ ಹರೀಶ್ ಗೌಡರನ್ನು ಬಂಧಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಪ್ರಯತ್ನ ಮಾಡಿದ ಶಾಸಕರ ಗುಂಪು ತಮ್ಮ ಉದ್ದೇಶ ಸಾಧಿಸಿದೆ ಎನ್ನುವವರಿದ್ದಾರೆ. ಆದರೆ ಪೊಲೀಸರು ಪೂರ್ವತಯಾರಿಯಂತೆ ಪರಿಶಿಷ್ಟರ ಶಾಂತಿ ಸಭೆ ನಡೆಸಿ, ಅದೇ ದಿನ ಸ್ಥಳೀಯ ಶಾಸಕರ ರಾಜಕೀಯ ವಿರೋಧಿಗಳ ಮೇಲೆ ಪೊಲೀಸ್ ದೂರು ದಾಖಲಿಸುವ ಹಿಂದೆ ಪೊಲೀಸರನ್ನು ಕಾಗೇರಿ ಕೈ ಆಡಿಸಿದೆ ಎನ್ನುವ ಬಹಿರಂಗ ಗುಟ್ಟು ಈಗ ಚರ್ಚೆಯ ವಿಷಯವಾಗಿದೆ.
ಈ ಪ್ರಕರಣದಲ್ಲಿ ಆರೋಪಿಗಳು ನಿರಪರಾಧಿಗಳಾದರೆ ರಾಜಕೀಯ ಪ್ರೇರಿತ ಪೊಲೀಸರು ಕಾಗೇರಿ ಕೈಗೊಂಬೆಗಳು ಎನ್ನುವ ಸತ್ಯ ಬಹಿರಂಗವಾಗಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಮೊದಲು ರಾಜಕೀಯ ಹಿತಾಸಕ್ತಿಯ ಕಾರಣಕ್ಕೆ ಅಪಘಾತ ಪ್ರಕರಣವನ್ನು ಪರಿಶಿಷ್ಟರ ದೌರ್ಜನ್ಯ ಎಂದು ತಿರುಚಲಾಗುತ್ತದೆ. ನಂತರ ಪೊಲೀಸರ ದುಡುಕು, ತಪ್ಪಿಗೆ ಪ್ರಾಯಶ್ಚಿತ್ತವಾಗಿ ಜೊಸೆಫ್ ಮತ್ತು ಅನಿಲ್ ಮೇಲೆ ಕೂಡಾ ಪೊಲೀಸ್ ಪ್ರಕರಣ ದಾಖಲಾಗುತ್ತದೆ. ಹಿಂದುಳಿದ ವರ್ಗಗಳ ಸಮಾವೇಶದ ವಿರುದ್ಧ ವೈದಿಕರ ರಾಜಕೀಯ ಪಿತೂರಿಯ ಅಂಗವಾಗಿ ನಡೆದ ಬೃಹನ್ ನಾಟಕದಲ್ಲಿ ಪೊಲೀಸರು ವಿಲನ್ ಆಗಿರುವುದು ಸಿದ್ಧಾಪುರದ ಘೋರ ದುರಂತಗಳಲ್ಲೊಂದು ಎನ್ನಲಾಗುತ್ತಿದೆ. ರಾಜಕೀಯ ದ್ವೇಶ ಸಾಧನೆಗೆ ಹೊರಟ ಶಾಸಕ ಕಾಗೇರಿಯವರ ಚಿತಾವಣೆ, ಸೇಡಿನ ಫಲವಾಗಿ ಕೆ.ಜಿ.ನಾಯ್ಕ ಮತ್ತು ವಸಂತ ನಾಯ್ಕ ಹೀರೋಗಳಾದರು ಎನ್ನುವ ಚರ್ಚೆ ತಾಲೂಕಿನಾದ್ಯಂತ ನಡೆಯುತ್ತಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
