ವರ್ತಮಾನದ ವ್ಯವಸ್ಥೆ ಪರಿಸ್ಥಿತಿ ಕಲುಶಿತಗೊಂಡಿದ್ದು ಶಾಂತಿ-ಸೌಹಾರ್ಧತೆ ಬಯಸುವವರು ಸಾಹಿತ್ಯ-ಸಾಂಸ್ಕೃತಿಕ ಬಂಕರ್ಗಳನ್ನು ನಿರ್ಮಾಣ ಮಾಡಿಕೊಂಡು ಬದುಕುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿರುವ ಹಿರಿಯ ರಂಗಕರ್ಮಿ ರಾಮಕೃಷ್ಣ ಭಟ್ ದುಂಡಿ ಪ್ರಸ್ತುತದ ಬಿಕ್ಕಟ್ಟುಗಳಿಗೆ ರಂಗಭೂಮಿ,ಸಾಂಸ್ಕೃತಿಕತೆಯಲ್ಲೇ ಪರಿಹಾರವಿದೆ ಎಂದು ಪ್ರತಿಪಾದಿಸಿದರು.
ಒಡ್ಡೋಲಗ ಹಿತ್ಲಕೈ ಆಯೋಜಿಸಿ ಸಿದ್ಧಾಪುರದಲ್ಲಿ ನಡೆದ ಎರಡು ದಿವಸಗಳ ರಾಜ್ಯ ಮಟ್ಟದ ನಾಟಕೋತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಹಿಜಾಬ್, ಹಲಾಲ್ ಎಂದು ವ್ಯರ್ಥ ಸಮಯ ಹಾಳುಮಾಡುತಿದ್ದೇವೆ. ಈಗಿನ ವಾತಾವರಣದಲ್ಲಿ ಯುಕ್ರೇನ್ ಪರಿಸ್ಥಿತಿ ನೆನೆದರೂ ನಡುಕ ಹುಟ್ಟುತ್ತದೆ. ಅಲ್ಲಿ ಜೀವಕ್ಕಾಗಿ ಬಂಕರ್ ಗಳಲ್ಲಿ ಆಶ್ರಯ ಪಡೆದಂತೆ ಭಾರತದ ಧರ್ಮಾಧಾರಿತ ವಿಷಮ ಸ್ಥಿತಿಯಲ್ಲಿ ಸಾಂಸ್ಕೃತಿಕ ಬಂಕರ್ಗಳಲ್ಲಿ ಅಡಗಿ ಕೂತರೆ ಮಾತ್ರ ಭವಿಷ್ಯ ಉತ್ತಮವಾಗಿರಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ಈ ಕಾರ್ಯಕ್ರಮದ ನಂತರ ನಡೆದ ಕಾಲಚಕ್ರ ನಾಟಕ ಪ್ರದರ್ಶನ ಪ್ರೇಕ್ಷಕರ ಮನಗೆದ್ದು ಅದ್ಭುತ ಪರಿಣಾಮ ಉಂಟು ಮಾಡಿತು. ಸಿದ್ಧಾಪುರದ ಹುಲಿಮನೆ ಸೀತಾರಾಮ ಶಾಸ್ತ್ರಿ ನೆನಪಿನಲ್ಲಿ ನಡೆದ ಈ ನಾಟಕೋತ್ಸವದಲ್ಲಿ ರಂಗಸಮೂಹ ಮಂಚೀಕೇರಿ ಕಾಲಚಕ್ರ ನಾಟಕ ಪ್ರದರ್ಶಿಸಿತ್ತು.