ಸಿದ್ದಾಪುರ: ಸಿದ್ದಾಪುರ ಪಟ್ಟಣ ಪಂಚಾಯತ ವಿಶೇಷ ಅನುದಾನದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೇವಲ ಮೂರು ಸದಸ್ಯರ ವಾರ್ಡಿಗೆ ಮಾತ್ರ ಅನುದಾನ ನೀಡಿ ಉಳಿದವರನ್ನು ಕಡೆಗಣಿಸಿದ್ದಾರೆ. ಹಾಗಾದರೆ ನಾವೇನು ಬಿಜೆಪಿ ಸದಸ್ಯರಲ್ಲವಾ ಎಂದು ಸ್ವಪಕ್ಷೀಯ ಸದಸ್ಯರು ಬಹಿರಂಗವಾಗಿ ಪ್ರಶ್ನಿಸಿದ ಘಟನೆ ಪಟ್ಟಣ ಪಂಚಾಯತ ಸಭೆಯಲ್ಲಿ ನಡೆದಿದೆ.
ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯತನ ಬಿಜೆಪಿ ಬಹುತೇಕ ಸದಸ್ಯರು ಶಾಸಕರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪಪಂನ ೧೫ ಸದಸ್ಯರಲ್ಲಿ ೧೪ ಜನ ಬಿಜೆಪಿಯಿಂದ ಆಯ್ಕೆಯಾದವರಿದ್ದೇವೆ. ೩ ಕೋಟಿ ವಿಶೇಷ ಅನುದಾನದಲ್ಲಿ ಮೂರು ಜನ ಸದಸ್ಯರ ವಾರ್ಡಿಗೆ ಮಾತ್ರ ೫೦-೯೦ ಲಕ್ಷ ಅನುದಾನ ನೀಡಿ ಉಳಿದವರಿಗೆ ಬಿಡಿಗಾಸು ನೀಡದೇ ಬೇಧಭಾವ ಮಾಡಿದ್ದಾರೆ. ಹಾಗಾದರೆ ನಾವು ಬಿಜೆಪಿ ಪರವಾಗಿ ಕೆಲಸ ಮಾಡಲಿಲ್ಲವಾ? ಶಾಸಕರೇನು ಬೇರೆ ಪಕ್ಷದವರಾ? ಮುಂದಿನ ಅನುದಾನದಲ್ಲಿ ಬಹುಮತದ ಆಧಾರದ ಮೇಲೆ ಅನುದಾನ ಹಂಚಿಕೆಯಾಗಲಿ ಎಂದು ವಾಗ್ವಾದ ನಡೆಸಿದರು.
೩ ಕೋಟಿ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಸದಸ್ಯರಾದ ಮಾರುತಿ ನಾಯ್ಕ, ಗುರುರಾಜ ಶಾನಭಾಗ ಹಾಗೂ ನಂದನ ಬೋರಕರ್ ರ ವಾರ್ಡಿಗೆ ಮಾತ್ರ ಅನುದಾನ ನೀಡಿದ್ದರು, ಈಗಿರುವ ಅನುದಾನದಲ್ಲಿ ಬಹುಮತದ ಮೇರೆಗೆ ಅನುದಾನ ಹಂಚಬೇಕು ಎಂದು ಒತ್ತಾಯಿಸಿದರು.
ಪಟ್ಟಣ ಪಂಚಾಯತನಲ್ಲಿ ೧೪-೧೫ ಹುದ್ದೆಗಳ ಕೊರತೆಯಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಯನ್ನು ಬಾಗಲಕೋಟೆಗೆ ವರ್ಗಾವಣೆಗೊಳಿಸಿದ್ದಾರೆ. ಒಳ್ಳೆ ಕೆಲಸ ಮಾಡುವ ನೌಕರರನ್ನು ಇಲ್ಲಿಗೆ ತರುವ ಬದಲು ಇಲ್ಲಿರುವವರನ್ನೆ ಬೇರೆ ಕಡೆ ವರ್ಗ ಮಾಡಿಸುತ್ತಿದ್ದಾರೆ. ಒಟ್ಟಿನಲ್ಲಿ ಸಿದ್ದಾಪುರ ಪಟ್ಟಣ ಪಂಚಾಯತಗೆ ಕೆಟ್ಟ ಹೆಸರು ತರುವ ಕೆಲಸ ಕಾಣದ ಕೈಗಳಿಂದ ನಡೆಯುತ್ತಿದೆ ಎಂದು ಪಪಂ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಅಸಮಧಾನ ವ್ಯಕ್ತಪಡಿಸಿದರು.
ಜುಲೈ ೧ ರಿಂದ ಪಟ್ಟಣದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ಬ್ಯಾನ್ ಮಾಡಲು ಚಿಂತನೆ ನಡೆಸಿದ್ದು, ಪ್ರಕಟಣೆ ಹಾಗೂ ಕರಪತ್ರದ ಮೂಲಕ ವ್ಯಾಪಕ ಪ್ರಚಾರ ನಡೆಸಲಾಗುವುದು ಎಂದು ಮುಖ್ಯಾಧಿಕಾರಿ ಕುಮಾರ ನಾಯ್ಕ ತಿಳಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ ಉಪಸ್ಥಿತರಿದ್ದರು.