
-ದೇವನೂರ ಮಹಾದೇವ

[‘ಎದೆಗೆ ಬಿದ್ದ ಅಕ್ಷರ’ ಸಂಕಲನದಿಂದ ಆಯ್ದ ಒಂದು ಬರಹ]
‘ನಮ್ಮನ್ನೂ ಒಂದ್ಸಲ ನೋಡಿ ನಮ್ಮನ್ನೂ ಒಂದ್ಸಲ ನೋಡಿ’ ಅನ್ನುತ್ತಿದ್ದ ಬಿಜೆಪಿ ಭೂತದ ಬಾಯ್ಗೆ, ಒಂದ್ಸಲ ನೋಡೇಬಿಡುವ ಅನ್ನುವ ಮತದಾರನ ಮನಸ್ಸಿನ ಚಪಲಕ್ಕೆ ಕರ್ನಾಟಕವು ಸಿಕ್ಕಿಕೊಂಡು ಈಗ ಒದ್ದಾಡುತ್ತಿದೆ. ಈ ಭೂತದ ಬಾಯಿಂದ ಕರ್ನಾಟಕವನ್ನು ಬಚಾವು ಮಾಡಬೇಕಾಗಿದೆ.
ಅಧಿಕಾರಕ್ಕೆ ಬಂದ ಈ ಭೂತವು ಮಾಡಿದ ಮೊದಲ ಕೆಲಸ- ಸಾರ್ವಜನಿಕ ಜೀವನದಲ್ಲಿ ಲಜ್ಜೆಯನ್ನು ಕೊಂದು ಬಿಟ್ಟಿತು. ಇದರಿಂದಾಗಿ, ಇಂದು ಏನೇಮಾಡಿದರೂ ಎಂಥ ಅಸಹ್ಯಕ್ಕೂ ನಾಚಿಕೆ ಆಗದು. ಸಂಸ್ಕೃತಿ ಸಂಸ್ಕೃತಿ ಅಂತ ಜಪಮಾಡುತ್ತಾ ಲಜ್ಜಾಹೀನ ಸಂಸ್ಕೃತಿಯನ್ನು ಸಾರ್ವಜನಿಕ ಜೀವನದಲ್ಲೂ ವಿಧಾನ ಸೌಧದ ಒಳಗೂ ಪ್ರತಿಷ್ಠಾಪಿಸಿಬಿಟ್ಟಿತು.
ಒಂದು ಕಡೆಯಿಂದ ಶಾಲೆ ಮುಚ್ಚುತ್ತಾ ಇನ್ನೊಂದು ಕಡೆಯಿಂದ ಹಾಸ್ಟೆಲ್ಗಳನ್ನು ಮುಚ್ಚುತ್ತಾ ಸಮಾನ ಶಿಕ್ಷಣಕ್ಕೂ ಎಳ್ಳು ನೀರು ಬಿಡುತಾ- ಹೀಗೆ ಮುಚ್ಚುತ್ತಾ ಎಳ್ಳುನೀರು ಬಿಡುತ್ತಾ ವಿಧಾನ ಸೌಧವನ್ನೂ ಹೆಚ್ಚು ಕಮ್ಮಿ ಮುಚ್ಚಿ ಬಿಟ್ಟಿದೆ. ಆಡಳಿತಕ್ಕೂ ಎಳ್ಳುನೀರು ಬಿಟ್ಟಿದೆ. ಆಳ್ವಿಕೆ ನಡೆಸಲು ಅನರ್ಹರಾದವರು ಅಧಿಕಾರಕ್ಕೆ ಬಂದರೆ ಏನಾಗುತ್ತದೋ ಅದು ನಮ್ಮಗಳ ಕಣ್ಮುಂದೆ ಈಗ ಜರುಗುತ್ತಿದೆ. ಇವರಿಗೆ ಮಾತೃಭೂಮಿಯ ಪ್ರೇಮ ಎಷ್ಟಿದೆ ಎಂದರೆ- ಭೂಮಿಯ ಮಣ್ಣನ್ನೇ ಬಗೆದು ನುಂಗುತ್ತಾರೆ ಅಥವಾ ಸ್ವಾಧೀನ ಪಡಿಸಿಕೊಂಡು ಸ್ವಂತ ಮಾಡಿಕೊಳ್ಳುತ್ತಾರೆ- ಹೀಗೆ ಇನ್ನೆಷ್ಟೋ. ಅಸ್ಪೃಶ್ಯನೊಬ್ಬ ಸಂವಿಧಾನ ಬರೆದದ್ದನ್ನು ಸಹಿಸಲಾಗದವರು ಏನು ಬೇಕಾದರೂ ಮಾಡಬಲ್ಲರು.
ಮೊನ್ನೆ ವಾಕಿಂಗ್ ಮಾಡುವಾಗ ನಾನೂ ಕೇಳಿಸಿಕೊಂಡೆ- ಪರಪ್ಪನ ಅಗ್ರಹಾರದಲ್ಲಿ ಇರಬೇಕಾದವರಲ್ಲಿ ಎಷ್ಟೋ ಜನ ವಿಧಾನ ಸೌಧದಲ್ಲಿ ಇದ್ದಾರೆ- ಅಂತ. ಈ ವಾಕಿಂಗ್ ಟಾಕ್ ಕರ್ನಾಟಕದ ತುಂಬಾ ನಡೆದಾಡುತ್ತಿದೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ಮೈಸೂರಿನಲ್ಲಾದ ಒಂದು ಘಟನೆಯ ವರದಿ ಬಂದಿತ್ತು. ಅದು ಹೀಗಿದೆ:
ವಯೋವೃದ್ಧರೊಬ್ಬರು ಪೇಪರ್ ಓದುತ್ತಾ ಸಾಗುತ್ತಿದ್ದರು. ಎಂದಿನಂತೆ ಬಿಜೆಪಿ ಶಾಸಕ ಎ. ರಾಮದಾಸ್ ಆ ವೃದ್ಧರನ್ನು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಒಡನೆಯೇ ಕಿಡಿಕಿಡಿಯಾದ ನಿವೃತ್ತ ಸರ್ಕಾರಿ ನೌಕರರಾದ ಆ ವಯೋವೃದ್ಧರು ‘ಯಾವ ಬಿಜೆಪಿ? ನಾನೂ ಬಿಜೆಪಿಯವನೇ. ತುಂಬಾ ನೋವಾಗುತ್ತಿದೆ. ಮೊದಲು ಆಪರೇಷನ್ ಕಮಲ ನಿಲ್ಸಿ. ಇಲ್ಲದಿದ್ದರೆ ಬಿಜೆಪಿ ಸರ್ವನಾಶವಾಗುತ್ತದೆ’ ಎಂದು ಕೋಪದಿಂದ ನುಡಿದಾಗ ಆ ಅವರನ್ನು ಮುಟ್ಟಿ ಸಮಾಧಾನಿಸಲು ರಾಮದಾಸ್ ಮುಂದಾದಾಗ ಆ ವೃದ್ಧರು- ‘ದೂರ ಸರಿಯಿರಿ. ನನ್ನ ಮುಟ್ಟಬೇಡಿ. ಮೈಲಿಗೆಯಾಗುತ್ತೆ’ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ರಾಮದಾಸ್ ಅವರೊಂದಿಗಿದ್ದ ಆರ್ಎಸ್ಎಸ್ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ದಾಮೋದರ್ ಬಾಳಿಗ ಅವರು ‘ಕೋಪ ಮಾಡ್ಕೊಬೇಡಿ’ ಎಂದು ಸಂಧಾನ ಮಾಡಲು ಮುಂದಾದಾಗ ಆ ವೃದ್ಧರು ‘ನೀನೂ ಹೊಲಸಾಗಿದ್ದೀಯಾ, ದೂರ ಸರಿ. ಆಪರೇಷನ್ ಕಮಲ ಬೇಡ ಎಂದು ಬಿಜೆಪಿಯವರಿಗೆ ಬುದ್ಧಿ ಕಲಿಸಲಾಗುವುದಿಲ್ಲವೆ? ನನ್ನ ಮುಟ್ಟಬೇಡ’ ಎಂದು ಬಿರಬಿರನೆ ಹೊರಟು ಹೋದರು.
ಇದು ವರದಿ. ಇದು ರಾಷ್ಟ್ರೀಯ ಸುದ್ದಿಯಾಗಬೇಕಿತ್ತು. ರಾಜ್ಯದ ರಾಜಕಾರಣವನ್ನು ಆಪರೇಷನ್ ಕಮಲದಿಂದ ಕೊಳಕು ಮಾಡಿದ ಬಿಜೆಪಿಗೆ ಶಾಪ ಕೊಡುವ ಋಷಿಮುನಿಯಂತೆ ಆ ವೃದ್ಧರು ಕಂಡರು. ಈ ಶಾಪ, ಇಂಥ ಕೃತ್ಯವೆಸಗುವ ಎಲ್ಲಾ ಪಕ್ಷಗಳಿಗೂ ತಟ್ಟುತ್ತದೆ. ಈ ಹಿನ್ನೆಲೆಯಲ್ಲಿ ಆ ವೃದ್ಧರಿಗೆ ಆಪರೇಷನ್ ಕಮಲವು ‘ಕಮಲವ್ಯಾಧಿ’ಯಾಗಿ ಕಂಡಿರಬೇಕು. ಜತೆಗೆ, ಇಂಥ ಪಕ್ಷ ಸಂಸಾರಸ್ಥರ ಮನೆಯಂತೆ ಕಂಡಿರಲಾರದು. ಯಾರೋ ಬರ್ತಾನೆ, ರಾತ್ರಿ ಮಲಗಿರ್ತಾನೆ, ಬೆಳಿಗ್ಗೆ ಎದ್ದು ಇನ್ನೊಂದು ಮನೆಗೆ ಹೋಗುತ್ತಾನೆ, ನಾಳೆ ಇನ್ನೊಬ್ಬ ಬರ್ತಾನೆ. ಮನೆಯ ಯಜಮಾನ ಹಲ್ಲುಗಿಂಜುತ್ತ ಕೈಹೊಸುಕುತ್ತ ಬರುವವರನ್ನೆಲ್ಲ ಸಂಭ್ರಮದಿಂದ ಸ್ವಾಗತಿಸುತ್ತಾ ಇರುತ್ತಾನೆ. ಹೀಗೆ ಕಂಡಿದ್ದರಿಂದಲ್ಲೇ ಆ ವೃದ್ಧರಿಗೆ ಇದನ್ನು ಕಂಡರೆ ಅಸಹ್ಯ ಹುಟ್ಟಿದೆ, ಇನ್ನೇನು ಹುಟ್ಟುತ್ತದೆ?
ಇಂಥ ಸಾತ್ವಿಕರು ಎಲ್ಲಾ ಪಕ್ಷಗಳಲ್ಲೂ ಸಾವಿರಾರು ಜನವಿರಬಹುದು. ಅವರು ಈಗಲಾದರೂ ತಮ್ಮ ಸಿಟ್ಟನ್ನು ತೋರಿಸಬೇಕಾಗಿದೆ.
ನನಗನಿಸುತ್ತೆ, ಇಂದು ಕರ್ನಾಟಕ ಬೇಡುತ್ತಿರುವುದು- ಸಮಾನತೆ ಸಾಮರಸ್ಯದ ಸಮಾಜ ಕಟ್ಟುವತ್ತ ಮುಖಮಾಡಿ ನಿಂತಿರುವ ಎಲ್ಲರೂ- ಕುಂಟುತ್ತಿರುವವರು, ಸರಿಯಾಗಿ ನಡೆಯುತ್ತಿರುವವರು, ತಪ್ಪುತಪ್ಪು ಹೆಜ್ಜೆ ಇಡುತ್ತಿರುವವರು, ತೆವಳುತ್ತಿರುವವರು, ಎಲ್ಲರೂ- ಯಾರ್ಯಾರು ಸಮಾನತೆ ಸಾಮರಸ್ಯದ ಕಡೆಗೆ ಮುಖಮಾಡಿದ್ದಾರೋ ಆ ಎಲ್ಲರೂ ತಂತಮ್ಮ ಚಿಲ್ಲರೆ ಬಿಟ್ಟು ಸಗಟಾಗಿ ನಡೆಯಬೇಕಾಗಿದೆ, ತಮ್ಮ ಉಳಿವಿಗಾಗಿ ಅಂತ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
