

ಪತ್ರಕರ್ತನಾದವನಿಗೆ ಹೋರಾಟದ ಮನೋಭಾವವಿರಬೇಕು, ಸಾಹಿತ್ಯಕ, ಸಾಂಸ್ಕøತಿಕ ಕಾಳಜಿಯಿರಬೇಕು. ಪತ್ರಕರ್ತನಾದವ ಕಾಲಕ್ಕೆ ತಕ್ಕಂತೆ ಅಪ್ಗ್ರೇಡ್ ಆಗುತ್ತಾ ಹೋಗಬೇಕು. ಅಧ್ಯಯನ ಶೀಲನಾಗಿರಬೇಕು. ಅಂದಾಗ ಮಾತ್ರ ಶಬ್ಧ ಪ್ರಯೋಗ ಹಾಗೂ ಸಾಂದರ್ಭಿಕ ನುಡಿಗಟ್ಟುಗಳನ್ನು ಅರಿತು ಬರೆಯಲು ಸಾಧ್ಯವಾಗುತ್ತದೆ ಎಂದು ಹರಪನಳ್ಳಿಯ ಹಿರಿಯ ಸಾಹಿತಿ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ನುಡಿದರು.
ಅವರು ದಾಂಡೇಲಿ ಪ್ರೆಸ್ ಕ್ಲಬ್ ಹಮ್ಮಿಕೊಂಡಿದ್ದ ‘ಪತ್ರಿಕಾ ದಿನಾಚರಣೆ ಹಾಗೂ ಗೌರವ ಸನ್ಮಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪತ್ರಕರ್ತ ಎಂದರೆ ಕೇವಲ ವರದಿಗಾರಿಕೆ ಮಾಡುವುದಷ್ಟೇ ಅಲ್ಲ. ಸಮಾಜದೊಳಗಿರುವ ಆಗು ಹೋಗುಗಳ ಬಗ್ಗೆ ಜನರಿಗೆ ತಲುಪಿಸುವಂತಹ ಲೇಖನಗಳನ್ನು ಬರೆಯುವ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ತಳ ಸಮುದಾಯದ ಜನರ ಪ್ರಗತಿಗಾಗಿ ಲೇಖನಗಳ ಮೂಲಕ ಗಮನ ಸೆಳೆಯಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿ ಸಾಮರಸ್ಯದ ಬದುಕನ್ನು ಕಟ್ಟಿಕೊಡುವಂತಹ ಕೆಲಸವನ್ನು ಮಾಡಬೇಕು. ಇದೇ ಪತ್ರಕರ್ತನ ನಿಜವಾದ ಕೆಲಸ ಎಂದರು.
ಮುಖ್ಯ ಅತಿಥಿ ತಹಶೀಲದಾರ ಶೈಲೇಶ ಪರಮಾನಂದ ದಾಂಡೇಲಿ ಪ್ರೆಸ್ಕ್ಲಬ್ ಜನಪರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಮಾತನಾಡಿ ಪತ್ರಕರ್ತನಾದವನ ಬದುಕು ಬಹಳ ಕಷ್ಟದ್ದು. ಆತ ತನ್ನ ಮೈಯ್ಯೆಲ್ಲಾ ಕಣ್ಣಾಗಿಸಿಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ. ಎಂದರು.
ಮುಖ್ಯ ಅತಿಥಿಗಳಾಗಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಪತ್ರಕರ್ತರಿಗೆ ಸರಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಒದಗಿಸುವಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ದಾಂಡೇಲಿ ಪ್ರೆಸ್ಕ್ಲಬ್ ಉತ್ತಮ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದು, ಅದಕ್ಕೆ ಪತ್ರಿಕಾ ದಿನಾಚರಣೆಯ ದಿನ ಸೇರಿರುವ ಇಲ್ಲಿಯ ಜನರೇ ಒಂದು ನಿದರ್ಶನವಾಗಿದೆ ಎಂದರು. ವೆಸ್ಟ್ಕೋಸ್ಟ್ ಪೇಪರ್ ಮಿಲ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ. ಗಿರಿರಾಜ ಶುಭಾಶಯಕೋರಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೆಸ್ಕ್ಲಬ್ನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಎಲ್ಲರ ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆಯ ಬರೆಯುವ ಪತ್ರಕರ್ತನಿಗೆ ನಿಜವಾಗಿಯೂ ಯಾವ ಭಧ್ರತೆಯೂ ಇರುವುದಿಲ್ಲ. ಆತನ ಬರಹಗಳೇ ಆತನಿಗೆ ನೈತಿಕ ಭದ್ರತೆಯಾಗಿರುತ್ತವೆ. ಆತನ ಲೇಖನಗಳಿಗೆ ಬರುವ ಪ್ರಶಂಸೆಗಳೇ ಆತನಿಗೆ ಪ್ರಶಸ್ತಿಗಳಾಗಿರುತ್ತವೆ. ಒಬ್ಬ ಪ್ರಾಮಾಣಿಕ ಪತ್ರಕರ್ತನಿಂದ ಎಲ್ಲರನ್ನೂ ಮೆಚ್ಚಿಸಿಕೊಂಡಿರಲು ಸಾದ್ಯವಿಲ್ಲ. ಎಲ್ಲ ರೀತಿಯ ವೈರುಧÀ್ಯಗಳನ್ನು ದಾಟಿ ಬರುವವನೇ ಗಟ್ಟಿಯಾದ ಪತ್ರಕರ್ತನಾಗಿ ನಿಲ್ಲಲು ಸಾದ್ಯ ಎಂದರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ಹಿರಿಯ ಪತ್ರಕರ್ತ ಯು.ಎಸ್. ಪಾಟೀಲ, ನಿವೃತ್ತ ಹಿರಿಯ ಶಿಕ್ಷಕಿ ಮರಿಯಾ ಪೆರರೋ, ಹಿರಿಯ ವೈದ್ಯ ಡಾ.ಎನ್.ಎ.ಖಾನ್ರನ್ನು ಸನ್ಮಾನಿಸಿ ಗೌರವಿಸಲಾಯಿತು. ಯು.ಎಸ್.ಪಾಟೀಲ ಸನ್ಮಾನಿತರ ಪರ ಅಭಿನಂದಿಸಿ ಮಾತನಾಡಿದರು.
ಮಾನಸಾ ಬಿ. ವಾಸರೆ ಪ್ರಾರ್ಥಿಸಿದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಸಂದೇಶ ಜೈನ್ ಸ್ವಾಗತಿಸಿ, ನಿರೂಪಿಸಿದರು. ಸದಸ್ಯ ಡಾ. ಬಿ.ಪಿ. ಮಹೇಂದ್ರಕುಮಾರ ಅತಿಥಿಗಳನ್ನು ಪರಿಚಯಿಸಿದರು.
ಖಜಾಂಚಿ ಗುರುಶಾಂತ ಜಡೇಹಿರೇಮಠ ವಂದಿಸಿದರು. ಸದಸ್ಯ ಕೃಷ್ಣಾ ಪಾಟೀಲ ಸಹಕರಿಸಿದರು. ವಿತರಕರಾದ ರಿಯಾಜ ನವಲಗುಂದ, ಅಕ್ಷಯ ಗೋಸಾವಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಿರಸಿ, ಯಲ್ಲಾಪುರ, ಜೋಯಿಡಾ, ಹಳಿಯಾಳದ ಪತ್ರಕರ್ತ ಸಂಘಟನೆಯ ಪ್ರಮುಖರು ಸೇರಿದಂತೆ ನಗರದ ಜನಪ್ರತಿನಿಧಿಗಳು, ಸಾಹಿತಿಗಳು, ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಭಾಗವಹಿಸಿದ್ದರು.

ಮಾಧ್ಯಮ ನೀತಿ ಸಂಹಿತೆ ಬದಲಾಗಲ್ಲ
ಧ್ವನಿ, ಅರಿವು ಇಲ್ಲದವರಿಗೆ ನ್ಯಾಯ ಕೊಡಿಸುವುದೇ ಮಾಧ್ಯಮಗಳ ಹೊಣೆ,ಕರ್ತವ್ಯಗಳಾಗಿದ್ದು ಅದು ಯಾವ ಕಾಲದಲ್ಲೂ ಬದಲಾಗದು ಎಂದಿರುವ ಹಿರಿಯ ಪತ್ರಕರ್ತ ಮೋಹನ ಹೆಗಡೆ ಮುದ್ರಣಮಾಧ್ಯಮ ಎಲ್ಲಾ ಸವಾಲುಗಳೊಂದಿಗೆ ಮುನ್ನುಗ್ಗುತ್ತಲೇ ತನ್ನ ವ್ಯಾಪ್ತಿ,ಪ್ರಾಮುಖ್ಯತೆ, ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದಿದ್ದಾರೆ. ಸಿದ್ಧಾಪುರ ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ನಡೆದ ತಾಲೂಕಾ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಮತ್ತು ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 2.5 ಲಕ್ಷ ಕೋಟಿ ಆರ್ಥಿಕ ವಹಿವಾಟು ಹೊಂದಿರುವ ಮಾಧ್ಯಮ ಕ್ಷೇತ್ರ ಅನೇಕರಿಗೆ ಜೀವನೋಪಾಯ ಒದಗಿಸಿದ್ದು ಅನೇಕರ ಶ್ರಮದಿಂದ ಎಲ್ಲಾ ಬದಲಾವಣೆಗಳಿಗೆ ಒಗ್ಗಿಕೊಂಡು ಭಾರತದಲ್ಲಿ ಭರವಸೆ ಉಳಿಸಿಕೊಂಡಿದೆ ಎಂದರು. ಮೋಹನ ಹೆಗಡೆಯವರೊಂದಿಗೆ ಸ್ಥಳಿಯ ಪತ್ರಿಕಾ ವಿತರಕರಾದ ಮಾರುತಿ ನಾಯ್ಕ ಮತ್ತು ವಸಂತ ಮಡಿವಾಳರನ್ನು ಸನ್ಮಾನಿಸಿ ಗೌರವಿಸಲಾಯಿತು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
