

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್. ಅಂಬೇಡ್ಕರ್ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆ ವೇಳೆ ಪೂಜೆ,ಆರಾಧನೆ ಎಷ್ಟು ಸರಿ ಎನ್ನುವ ಪ್ರಶ್ನೆ ಇಂದು ಸಿದ್ಧಾಪುರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ಚರ್ಚೆಯಾಯಿತು.
ಮಾಮೂಲಿ ಸರ್ಕಾರಿ ಕಾರ್ಯಕ್ರಮಗಳಂತೆ ಭಟ್ಟರ ಪೂಜೆ, ಮೂರ್ತಿಆರಾಧನೆಗಳ ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಮೊದಲ್ಗೊಂಡಾಗ ಕೆಲವು ಯುವಕರು ಇದು ಬಾಬಾಸಾಹೇಬರಿಗೆ ಅಪಚಾರ ಎಂದು ಆಕ್ಷೇಪಿಸಿದರು. ಈ ಆಕ್ಷೇಪ, ಗೊಣಗುವಿಕೆ ತಪ್ಪಿಸಲು ಪ.ಪಂ. ಸದಸ್ಯ ನಂದನ್ ಬೋರ್ಕರ್ ಜೈ ಭೀಮ್ ಘೋಷಣೆ ಕೂಗಿ ಈ ತಕರಾರು ತಗ್ಗಿಸಿದರು.
ವಾಸ್ತವದಲ್ಲಿ ಅಂಬೇಡ್ಕರ್ ಮೂರ್ತಿಗೆ ಪೂಜೆ ಸಲ್ಲಿಸುವುದಕ್ಕಿಂತ ವಿಧಾಯಕವಾಗಿ ಡಾ. ಬಾಬಾ ಸಾಹೇಬರ ಸಿದ್ಧಾಂತ ಗೌರವಿಸಿ ಅಂಬೇಡ್ಕರ್ ಜಯಂತಿ ಆಚರಿಸಿ ಎನ್ನುವುದು ಯುವಕರ ಕೂಗಾಗಿತ್ತು. ಈ ಕೂಗು ಕ್ಷೀಣವಾದಾಗ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರತಿಭಾವಂತದಲಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಅಭಿನಂದಿಸಿ, ಗೌರವಿಸಲಾಯಿತು. ಗ್ಯಾರಂಟಿ ಸಮೀತಿ ಅಧ್ಯಕ್ಷ ಕೆ.ಜಿ. ನಾಗರಾಜ್, ಭೀಮಸೇನೆ ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ್ ಬೋರ್ಕರ್ ಸೇರಿದಂತೆ ಅನೇಕರು ಡಾ. ಅಂಬೇಡ್ಕರ್ ಕೊಡುಗೆಗಳನ್ನು ಸ್ಮರಿಸಿದರು.
