

ಶಿರಸಿ: ಬಿಜೆಪಿ ಶಿರಸಿ ಗ್ರಾಮೀಣ ಮಂಡಲ ಹಾಗೂ ಜಿಲ್ಲಾ ರೈತ ಮೋರ್ಚಾ ವತಿಯಿಂದ ತಾಲೂಕಿನ ಬನವಾಸಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಅಕ್ರಮ-ಸಕ್ರಮ ಅರ್ಜಿ ತಿರಸ್ಕರಿಸಿರುವುದು, ೯/೧೧ ನಿವೇಶನಗಳ ಸಮಸ್ಯೆ, ಗ್ರಾಮೀಣ ರಸ್ತೆಗಳ ದುರಸ್ತಿ, ಹೊಸ ಆಶ್ರಯ ಮನೆಗಳ ಮಂಜೂರಾತಿ, ಹಿಂದಿನ ಆಶ್ರಯ ಮನೆಗಳ ಹಣ ಬಿಡುಗಡೆ, ವೃದ್ಧಾಪ್ಯ ಮೇಲಿನ, ಸಂಧ್ಯಾ ಸುರಕ್ಷ ಪಿಂಚಣಿ ರದ್ಧತಿ, ವಿದ್ಯುತ್ ದರ ಏರಿಕೆ, ನಿರಂತರ ವಿದ್ಯುತ್ ಕೊರತೆ ಆಕ್ಷೇಪಿಸಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರೆಂಟಿ ನೀಡಿ, ಹಿಂದಿನ ಸರ್ಕಾರ ಅನುಷ್ಠಾನಗೊಳಿಸಿದ ಯೋಜನೆಗಳನ್ನು ಸ್ಥಗಿತಗೊಳಿದೆ. ಗ್ರಾಪಂಗಳಲ್ಲಿನ ಸೌಲಭ್ಯ ತೆಗೆದು ತಹಸೀಲ್ದಾರ, ಜಿಲ್ಲಾಧಿಕಾರಿಗಳ ಕಚೇರಿ ಅಲೆಯುವ ಸ್ಥಿತಿ ನಿರ್ಮಾಣ ಮಾಡಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಆಶ್ರಯ ಮನೆಗಳನ್ನು ನೀಡಲು ಸಾಧ್ಯವಾಗಿಲ್ಲ. 500 ಮೀಟರ್ ರಸ್ತೆ ನಿರ್ಮಿಸಲು ಇವರಲ್ಲಿ ಆಗಿಲ್ಲ. ಆಶ್ರಯ ಮನೆಗಳಿಗೆ ಹಣ ಬಿಡುಗಡೆಗೆ ಲಂಚ ನೀಡುವ ಪರಿಸ್ಥಿತಿಯನ್ನು ತಂದಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.


ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಯಾವ ರಸ್ತೆಗಳೂ ಸರಿಯಾಗಿಲ್ಲ. ಎಲ್ಲ ರಸ್ತೆಗಳು ಹೊಂಡಗಳಿಂದ ಕೂಡಿದ್ದು, ಜನರ ಪರಿಸ್ಥಿತಿ ಅಯೋಮಯವಾಗಿದೆ. ಪ್ರತಿಯೊಂದು ದಿನಾವಶ್ಯಕ ವಸ್ತುಗಳ ಬೆಲೆಯಂತೂ ಗಗನಕ್ಕೇರಿದೆ. ಸರಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸಣ್ಣ ಪುಟ್ಟ ಕಾಗದಪತ್ರಗಳಿಗಾಗಿ ಜನತೆ ತಿಂಗಳುಗಟ್ಟಲೇ ಇಲಾಖೆಗಳನ್ನು ಅಲೆದಾಡ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಸರಕಾರ ಬದುಕಿದೆಯೋ ಇಲ್ಲವೋ ಎಂಬುದು ತಿಳಿಯುತ್ತಿಲ್ಲ ಎಂದು ಆಕ್ರೋಶವನ್ನು ಹೊರಹಾಕಿದರು.

ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಗ್ಯಾರೆಂಟಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿರುವುದು ಸ್ವಾಗತಾರ್ಹವಾದರೂ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡದ ಪರಿಣಾಮ
ಸಂಸ್ಥೆ ಬಾಗಿಲು ಹಾಕುವ ಸ್ಥಿತಿ ಬಂದಿದೆ. ಕೆಎಸ್ಆರ್ಟಿಯಲ್ಲಿ ಚಾಲಕ-ನಿರ್ವಾಹಕರು, ಮೆಕ್ಯಾನಿಕಲ್ ಸಿಬ್ಬಂದಿಗಳ ಕೊರತೆಯಿಂದ ದಾರಿ ಮಧ್ಯೆ ಬಸ್ಸುಗಳು ಕೆಟ್ಟು ನಿಲ್ಲುತ್ತಿವೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ವಸತಿ ಮನೆಗಳಿಗೆ ೧೦ ಸಾವಿರ ಲಂಚ ನೀಡಿದರೆ ಮಾತ್ರ ಹಣ ಬಿಡುಗಡೆಯಾಗುತ್ತದೆ. ಸಂಪೂರ್ಣ ಭ್ರಷ್ಟಾಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮುಳುಗಿದೆ ಎಂದು ಆರೋಪಿಸಿದರು.
ಸ್ಥಳೀಯ ಮುಖಂಡ ರುದ್ರ ಗೌಡರ ಮಾತನಾಡಿ, ಸರ್ಕಾರ ಗ್ಯಾರೆಂಟಿ ಯೋಜನೆಯಡಿಯಲ್ಲಿ ದರೋಡೆ ಮಾಡುತ್ತಿದೆ. ಅಭಿವೃದ್ಧಿ ಇಲ್ಲ. ಎಲ್ಲ ಗ್ಯಾರೆಂಟಿ ಯೋಜನೆ ನೀಡಿದ್ದೇವೆ ಎಂದು ಹೇಳುತ್ತಾರೆ. ಮನೆ ನಂಬರ್ ಪಡೆಯಲು ಗ್ರಾಪಂನಿಂದ ಹಿಡಿದು ತಾಲೂಕಾ ಮಟ್ಟದ ಕಚೇರಿ ಅಲೆದಾಡುವ ಸ್ಥಿತಿ ಇದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ ಗೌಡರ ಮಾತನಾಡಿ, ರಾಜ್ಯದ ಜನರಿಂದ ಹಣ ವಸೂಲಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಬೇರೆ ರಾಜ್ಯದ ಚುನಾವಣೆಗೆ ಹಣ ಕಳುಹಿಸುತ್ತಿದೆ. ನೀರು, ರಸ್ತೆ, ಚರಂಡಿ, ಆರೋಗ್ಯಕ್ಕೆ ಅನುದಾನ ಇಲ್ಲ ಎಂದು ಇಲಾಖೆಯು ಹೇಳುತ್ತಿವೆ. ಇಲ್ಲಿನ ಹಣವೆಲ್ಲವೂ ಬೇರೆ ರಾಜ್ಯದ ಚುನಾವಣೆಗೆ ಕಾಂಗ್ರೆಸ್ ಬೊಕ್ಕಸಕ್ಕೆ ಹೋಗುತ್ತಿದೆ ಎಂದರು.
ಮಹಿಳಾ ಮುಖಂಡೆ ಶಾಂತಲಾ ಕಾನಳ್ಳಿ ಮಾತನಾಡಿ, ಅಭಿವೃದ್ಧಿ ಶೂನ್ಯವಾಗಿ, ರಸ್ತೆಗಳಲ್ಲಿ ಹೊಂಡಮಯವಾಗಿದ್ದು, ಸರ್ಕಾರದ ಆಸ್ತಿಯ ಬದಲು ಸಚಿವರು, ಶಾಸಕರು ತಮ್ಮ ಕೈನಿಂದ ನೀಡಲಿ. ಅಭಿವೃದ್ಧಿ ಯಲ್ಲಿ ಕರ್ನಾಟಕ ಹಿಂದುಳಿದೆ. ಇದು ಹೀಗೆ ಮುಂದುವರೆದರೆ ಭಿಕ್ಷೆ ಬೇಡವು ಸ್ಥಿತಿ ಬಂದೊದಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಮುಖಂಡ ಅರವಿಂದ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೂಟ್ಕೇಸ್ ಸರ್ಕಾರವಾಗಿದ್ದು, ಇವರಿಬ್ಬರು ಮುಖ್ಯಮಂತ್ರಿ ಖುರ್ಚಿಗಾಗಿ ದೆಹಲಿಯಲ್ಲಿ ವಾಸ್ತವ್ಯ ಮಾಡಿದ್ದಾರೆ. ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ ಮಾತನಾಡಿ, ರಾಜ್ಯ ಸರ್ಕಾರದ ನೀತಿಯನ್ನು ಬಿಜೆಪಿ ಖಂಡಿಸಿ, ಗ್ರಾಪಂ ಮಟ್ಟದಲ್ಲಿ ಅಮೋಘ ಹೋರಾಟ ಕೈಗೊಂಡಿದೆ. ಗಟ್ಟಿಚರ್ಮದ ಸರ್ಕಾರಕ್ಕೆ ಜನಸಾಮಾನ್ಯರ ಕಷ್ಟ ತಿಳಿಯುತ್ತಿಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗೆ ಮೂಲ ಸೌಕರ್ಯ ನೀಡದೇ ಧಾರುಣವಾಗಿ ಬೀದಿಗೆ ತರುತ್ತಿದೆ. ಗ್ರಾಪಂಗಳಿಗೆ ಅನುದಾನ ನೀಡದೇ ಜನಸಾಮಾನ್ಯರ ರಕ್ತ ಹೀರುತ್ತಿದೆ. ಈ ಸರ್ಕಾರ ತೊಲಗಬೇಕು ಎಂದರು.
ಗ್ರಾಮೀಣ ಮಂಡಳ ಅಧ್ಯಕ್ಷೆ ಉಷಾ ಹೆಗಡೆ, ಗಣೇಶ ಸಣ್ಣಲಿಂಗಣ್ಣನವರ್, ಮಂಜುನಾಥ ನಾಯ್ಕ, ವಿಶ್ವನಾಥ ಹಾದಿಮನಿ, ಚಂದ್ರು ಗೌಡ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿ ಸ್ಥಿತಿಯಲ್ಲಿದ್ದು, ಹಲಗದ್ದೆ ಗ್ರಾಪಂ ಕೆರೆಕೊಪ್ಪದಲ್ಲಿ ಉದ್ಯೋಗಖಾತ್ರಿ ಯೋಜನೆ ರಸ್ತೆಯನ್ನು ಸ್ಥಳೀಯ ಶಾಸಕರು ಉದ್ಘಾಟನೆ ಮಾಡುವ ಹೀನಾಯ ಸ್ಥಿತಿ ಬಂದಿದೆ.
-ರಮೇಶ ನಾಯ್ಕ, ಕುಪ್ಪಳ್ಳಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






