ಉಳಿದವರೊಬ್ಬರೇ ಸ್ವಾತಂತ್ರ್ಯ ಸೇನಾನಿ,ಗಡದಬಂಗಾರಪ್ಪ

ಉಳಿದವರೊಬ್ಬರೇ ಸ್ವಾತಂತ್ರ್ಯ ಸೇನಾನಿ,
ದೇಹ ಸಹಕರಿಸದಿದ್ದರೂ
ಮನಸ್ಸು ಹೋರಾಟದತ್ತ!
ಎನ್ನುವಂತಿರುವ
ಗಡದಬಂಗಾರಪ್ಪ

( ಇವರ ಬದುಕು, ಹೋರಾಟ,ಸಾಧನೆಗಳ ಸವಿವರದ ಸಂದರ್ಶನ samaajamukhi ಯೂ ಟ್ಯೂಬ್ ಚಾನಲ್ ನಲ್ಲಿದೆ.)
ಇದು ಒಂದು ರೋಚಕ ಪ್ರಸಂಗ, ಹಿರಿಯ ಸ್ನೇಹಿತ ದಫೇದಾರರೊಂದಿಗೆ ಮನ್ಮನೆಯ ಬಂಗಾರ್ಯ ನಾಯ್ಕರ ಮನೆಯ ಅಂಗಳ ತಲುಪಿದಾಗ ಮನೆಯೊಡೆಯನಿದ್ದಾನೋ? ಮನೆಒಳಗೆ ಎನ್ನುವ ಕುತೂಹಲ.
ನಾನೇ ಕೇಳಿದೆ ಬಂಗಾರಪ್ಪ ಇದ್ದಾರಾ? ಎಂದು.
ಈಗಷ್ಟೇ ಪದವಿ ಮುಗಿಸಿ ಅಧಿಕಾರಿಯಾಗಬೇಕೆಂದು ಓದುತ್ತಾ ಇರುವ ಹುಡುಗಿ ‘ಇದ್ದಾರೆ’,ಎಂದು ಉತ್ತರಿಸಿತು.
ಅಷ್ಟೊತ್ತಿಗೆ ಬಂಗಾರಪ್ಪ ನಾಯ್ಕ ಬಂದರು. ಅದು ಸಣ್ಣ ಮನೆ, ವ್ಯವಸ್ಥಿತವಲ್ಲದ ಸಾದಾ ರೈತ ಕುಟುಂಬದ ಮನೆಯಲ್ಲಿ ಇರುವ ಹಿರಿಯ ಜೀವ ಬಂಗಾರಪ್ಪ ನಾಯ್ಕ ಬಂದರು. ನಾವಿಬ್ಬರೂ ನಮಸ್ಕರಿಸಿದೆವು. ಅವರೂ ಪ್ರತಿನಮಸ್ಕರಿಸಿ, ನಮ್ಮ ಪರಿಚಯ ಮಾಡಿಕೊಂಡರು.
ಕುಗ್ಗದ ಉತ್ಸಾಹ, ಸ್ವಲ್ಫ ಬಳಲಿದಂತೆ ಕಂಡರೂ ಕಣ್ಣು,ಮಾತುಗಳ ಸ್ಫಷ್ಟತೆಯ ಬಂಗಾರಪ್ಪನವರಿಗೆ ಎಷ್ಟು ವಯಸ್ಸು ಕೇಳಿದೆವು. ಗೋಡೆಯ ಮೇಲಿನ ಚಿತ್ರ ತೋರಿಸಿ ಅಲ್ಲಿ ನೋಡಿ ಎಂದರು. ಅಲ್ಲಿ ಕಲಾವಿದ ಬಿಡಿಸಿದಂಥ ಇವರದೇ ಚಿತ್ರದ ಕೆಳಗೆ ಬಂಗಾರಪ್ಪ ನಾಯ್ಕ 1917 ಎಂದು ಬರೆದಿತ್ತು.
ಅವರಿಗೆ ಈಗ 103 ವರ್ಷ.
ಅಂದಹಾಗೆ, ಈ ಬಂಗಾರಪ್ಪ ಸ್ವಾತಂತ್ರ್ಯ ಹೋರಾಟ, ಕಾಗೋಡು ರೈತ ಹೋರಾಟಗಳಲ್ಲಿ ಪಾಲ್ಗೊಂಡ ಮನ್ಮನೆ ಬಂಗಾರಪ್ಪ ನಾಯ್ಕ
ಸಿದ್ಧಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟದ ಕಥೆ ಬಲುರೋಚಕ.
ಇಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಬ್ರಿಟೀಷ್ ಆಡಳಿತದ ಪೊಲೀಸ್ ಪಟೇಲ್ ಮನೆತನದ ಬೇಡ್ಕಣಿ ಚೌಡಾ ನಾಯ್ಕರಂಥ ಬಂಡಾಯಗಾರರಿದ್ದಾರೆ. ದೇವಿ ಹಸ್ಲರ್ ರಂಥ ಮುಗ್ಧ, ಪ್ರಾಮಾಣಿಕ ಮಹಿಳೆಇದ್ದಾರೆ. ಬ್ರಾಹ್ಮಣರು, ದಲಿತರು, ಹಿಂದುಳಿದವರು ಅವರಿವರೆನ್ನದೆ ಎಲ್ಲರೂ ಸೇರಿದ್ದಾರೆ. ಗಣೇಶ್ ಹೆಗಡೆ, ಜಿ.ಟಿ.ಹುಲೇಕಲ್, ಎಚ್.ಗಣಪತಿಯಪ್ಪ, ಶಾಮಣ್ಣ ಹೆಗಡೆ ಹೀಗೆ ಹೋರಾಟ ಮಾಡಿದ ಧೀರರ ಹೆಸರಿನ ಪಟ್ಟಿ ಮುಗಿಯುವುದೇ ಇಲ್ಲ.
ಆದರೆ ದುರ್ದೈವ ಇವರಲ್ಲಿ ಮನ್ಮನೆ ಬಂಗಾರಪ್ಪ ಬಿಟ್ಟರೆ ಬೇರೆ ಯಾರೂ ಈವರೆಗೆ ಬದುಕಿಲ್ಲ.
ಮಘೇಗಾರಿನ ನರಸಿಂಹ ಹೆಗಡೆ, ಮರಲಗಿಯ ಗೌಡರು ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಇವರೆಲ್ಲರ ಧೀರ ಹೋರಾಟದ ಜೊತೆಗಾರರ ಕೊನೆಯ ಕೊಂಡಿ ಈ ಬಂಗಾರಪ್ಪ ನಾಯ್ಕ.
1947ರ ಒಂದು ದಿನ ಯುವಕ ಬಂಗಾರಪ್ಪ ತಮ್ಮ ಸ್ನೇಹಿತರೊಂದಿಗೆ ಮಾರನ್‍ಕಲ್ ಮೋರಿ ಅಥವಾ ಚೌಡಿಗುಂಡಿ ಪೂಲ್ ಒಡೆಯಲು ಹೋಗುತ್ತಾರೆ. ಮೋರಿ ಒಡೆಯುವ ಕೆಲಸ ಪ್ರಗತಿಯಲ್ಲಿದ್ದಾಗಲೇ ವಾಹನವೊಂದು ಬಂದು ಈ ಯುವಕರನ್ನೆಲ್ಲಾ ತುಂಬಿಕೊಂಡು ಶಿವಮೊಗ್ಗ ತೆರಳುತ್ತದೆ. ಅಲ್ಲಿ ಬಂಧನದಲ್ಲಿದ್ದಾಗ ಹತ್ತು ವರ್ಷ ಕಠಿಣ ಶಿಕ್ಷೆಯಾಗುತ್ತಲೇ ಸ್ವಾತಂತ್ರ್ಯ ಹೋರಾಟಗಾರರ ಜಂಗಾಬಲವೇ ಕುಸಿಯುತ್ತದೆ. ಆದರೆ ಕೆಲವೇ ದಿವಸಗಳಲ್ಲಿ ಸ್ವಾತಂತ್ರ್ಯ ದೊರೆತು ಇವರೆಲ್ಲಾ ಸ್ವತಂತ್ರರಾಗುತ್ತಾರೆ. ಅಂದು 1947 ರ ಸ್ವಾತಂತ್ರ್ಯೋತ್ಸವ ದಿನ. ಇಂಥ ಕತೆಯನ್ನು ಬಂಗಾರಪ್ಪ ಹೇಳುವಾಗ ಭಾವುಕತೆ, ನೋವು ಸುಳಿಯುವುದಿಲ್ಲ. ಅವರನ್ನು ಹೊರಗೆ ಕಳುಹಿಸದಿದ್ದರೆ ಬಹಳ ಕಷ್ಟವಿತ್ತು. ಗುಪ್ತಾಂಗದಲ್ಲಿ ಸೂಜಿ ತೂರಿಸುವ ಮೂರನೆಯ ದರ್ಜೆಯ ಹಿಂಸೆಗೆ ಹಿಂಜರಿಯದ ಬ್ರಿಟೀಷರು ಕಟುಕರಾಗಿದ್ದರು, ನಂತರ ಗೇಣಿ ಆಳುಗಳನ್ನಾಗಿಸಿಕೊಂಡ ನಮ್ಮವರೇ ಜಮೀನ್ಧಾರರು ನಮ್ಮ ವಿರೋಧಿಗಳಾಗಿದ್ದರು ಎನ್ನುತ್ತಲೇ,ಹತ್ತು ವರ್ಷಗಳ ಸೆರೆಮನೆವಾಸದ ಬದಲು 91 ನೇ ದಿನ ಬಂಧಮುಕ್ತರಾಗಿ,ದೇಶದೊಂದಿಗೇ ಸ್ವತಂತ್ರರಾದ ಖುಷಿ ಹೇಳುವಾಗ ಅವರ ಮೈ ಕಂಪಿಸುತ್ತದೆ. ಬ್ರಿಟೀಷರು, ಜಮೀನ್ಧಾರರ ವಿರುದ್ಧದ ಹೋರಾಟದಲ್ಲಿದ್ದವರು ಇದೇ ಬಂಗಾರಪ್ಪ ಮತ್ತು ಸಂಗಾತಿಗಳು.
ಎಚ್.ಗಣಪತಿಯಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದು ತಿಳಿದಿತ್ತು ಆದರೆ ಅವರ ಸಂಪರ್ಕವಾಗಿದ್ದು ಕಾಗೋಡು ರೈತ ಹೋರಾಟದಲ್ಲಿ ಎನ್ನುವ ಬಂಗಾರಪ್ಪ ಸ್ವಾತಂತ್ರ್ಯಾ ನಂತರ 1950 ರ ದಶಕದಲ್ಲಿ ನಡೆದ ರೈತ ಚಳವಳಿಯಲ್ಲಿ ತೊಡಗಿಸಿಕೊಂಡ ತಮ್ಮೂರಿನ ಚೌಡಾ ಹುಚ್ಚಾ ಚೂರಿ, ಮಾಸ್ತ್ಯಾ ಬಸವ ಮಾರನಮನೆ, ಚೌಡಾ ಸಣ್ಣ್ಯಾ ಕಾಶಿ, ಕೊಲ್ಲೂರಾ ದುರ್ಗಾ ಕಾಡೇನ್ ದ್ಯಾವಾ ಹುಚ್ಚಾ ಮಡಿವಾಳ, ಮುಂತಾದವರ ಹೆಸರು ಸ್ಮರಿಸುತ್ತಾರೆ.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹುಲೇಕಲ್ ನೇತೃತ್ವದಲ್ಲಿ ತಾವೆಲ್ಲಾ ಹೋರಾಡಿದ್ದು ನಂತರ ಎಚ್.ಗಣಪತಿಯಪ್ಪನವರೊಂದಿಗೆ ಚಳವಳಿ ಮಾಡಿದ್ದು, 500 ರೂಪಾಯಿ ಸಾಲ ತೀರಿಸಲಾಗದೆ ಜಮೀನು ಕಳೆದುಕೊಂಡಿದ್ದು ನಂತರ ಊಳುವವನೇ ಒಡೆಯ ಕಾನೂನಿನಿಂದ ತಮ್ಮ ಮೂಲ ಮೂರು ಎಕರೆ ಮರಳಿ ಬಂದಿದ್ದು ಹೀಗೆ ಬಂಗಾರಪ್ಪ ಕತೆ ಹೇಳುತಿದ್ದರೆ, ಸ್ವಾತಂತ್ರ್ಯ ಪೂರ್ವದ ಬ್ರಿಟೀಷರ ಹಿಂಸೆ, ಸ್ವಾತಂತ್ರ್ಯಾನಂತರದ ಒಡೆಯರ ಕಾಟ ಎಲ್ಲವೂ ಕಣ್ಮುಂದೆ ಮೆರವಣಿಗೆ ಹೊರಟಂತೆನಿಸುತ್ತದೆ.
ಬಂಗಾರಪ್ಪ ನಾಯ್ಕ ಈಗಲೂ ಸರಳ ಮುನುಷ್ಯ, ಸರಳ ಜೀವನ ಇವರೊಂದಿಗೆ ಇವರ ಕುಟುಂಬದ ಆಭರಣ. ಸ್ವಾತಂತ್ರ್ಯ ಹೋರಾಟ, ಕಾಗೋಡು ಹೋರಾಟದ ಜೀವಂತ ಸಾಕ್ಷಿಯಾಗಿರುವ ಬಂಗಾರಪ್ಪ ನಾಯ್ಕ ಸ್ವಾತಂತ್ರ್ಯ ಹೋರಾಟದ ನೆಲದ ಏಕೈಕ ಜೀವಂತ ಸಾಕ್ಷಿ. ಈಗಿನ ವ್ಯವಸ್ಥೆ, ಹೊಸ ಜನಾಂಗದ ವಿಸ್ಮøತಿ, ಆಧುನಿಕತೆಯ ದುರಂತ ಎಲ್ಲದಕ್ಕೂ ಸಾಕ್ಷಿಯಾಗಿರುವ ಈ ಬಂಗಾರಪ್ಪ ಸಿದ್ಧಾಪುರ ತಾಲೂಕು, ಉತ್ತರಕನ್ನಡದ ಆಸ್ತಿ. ಇವರ ಸ್ಮರಣೆ, ಹೋರಾಟ, ಅನುಭವಗಳ ದಾಖಲೀಕರಣ ಅಷ್ಟಾಗಿ ಆಗದಿರುವುದು ಇಲ್ಲಿಯ ಸಾಮಾಜಿಕ ಕರಾಳತೆಯ ದುರಂತ. ಸ್ವಾತಂತ್ರ್ಯ ಹೋರಾಟ, ಕಾಗೋಡುಹೋರಾಟಗಳ ಕೊನೆಯ ಕೊಂಡಿ ಬೇಗ ಕಳಚದೇ ಇನ್ನಷ್ಟು ವರ್ಷ ಇವರ ದೇಹ ಈ ಭೂಮಿಯ ಮೇಲೆ ನಡೆದು ಮತ್ತಷ್ಟು ಚೇತನ ತುಂಬಲಿ ಎಂದು ಮನತುಂಬಿ ಹಾರೈಸಬೇಕಷ್ಟೆ.
ಹೋರಾಟಕ್ಕೆ ಸಿಕ್ಕಿದ್ದು ಗೇಲಿ, ತಮಾಶೆಯ ಗೌರವ-
ಸ್ವಾತಂತ್ರ್ಯ ಹೋರಾಟ,ಕಾಗೋಡು ಚಳವಳಿಗಳಲ್ಲಿ ಪಾಲ್ಗೊಂಡ ಇವರಿಗೆ ಬಹಳ ವರ್ಷಗಳ ನಂತರ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ದೊರೆತದ್ದಂತೆ. ಶಿವಮೊಗ್ಗದಲ್ಲಿ ಜೈಲಿನಲ್ಲಿದ್ದು ಸೇತುವೆ ಮುರಿಯುವ ಕೆಲಸದಲ್ಲಿ ಪಾಲ್ಗೊಂಡು ಜೈಲು ಸೇರಿದ ಪ್ರಮಾಣಪತ್ರ ಸಲ್ಲಿಸಿ ಗೌರವಧನ ಪಡೆಯಲು ಹೋರಾಟವನ್ನೇ ಮಾಡಬೇಕಾಯಿತು. ಆ ಅವಧಿ ನಂತರದ ದಿನಗಳಲ್ಲೂ ಜನರು ನಮ್ಮ ಹೋರಾಟ,ಚಳವಳಿಗಳ ಬಗ್ಗೆ ಗೇಲಿ ಮಾಡಿದ್ದೇ ಹೆಚ್ಚು ಎನ್ನುವ ಬಂಗಾರಪ್ಪ ನಾಯ್ಕ ಇಂಥ ಸಾರ್ವಜನಿಕ ಕುಚೋದ್ಯಗಳ ಬಗ್ಗೆ ಡೋಂಟ್ ಕೇರ್ ಎನ್ನುವಂತೆ ಮೀಸೆಯ ಮರೆಯಲ್ಲೇ ನಗುತ್ತಾರೆ. ಮನ್ಮನೆಯ ಗಡದ ಬಂಗಾರಪ್ಪ ಎಂದೇ ಹೆಸರುವಾಸಿಯಾಗಿರುವ ಬಂಗಾರಪ್ಪ ಸ್ವಾತಂತ್ರ್ಯ ಹೋರಾಟದಂತೆಯೇ ಸಮಾಜದ ವಿಸ್ಮøತಿ ಯಾಗುತ್ತಿರುವುದು ಈ ಕಾಲದ ದುರಂತ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *