![](https://i0.wp.com/samajamukhi.net/wp-content/uploads/2020/02/20191210_130234-scaled.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸ್ಥಳಿಯರ ನೆರವು,ಸಹಕಾರದಿಂದ ಶಾಲೆ
ಜ್ಞಾನದೇಗುಲವಾದ ಚೆಂದ
ಹೂಡ್ಲಮನೆಯ ಕನ್ನಡಶಾಲೆ
ರಾಜ್ಯಕ್ಕೆ ಮಾದರಿಯಾದ ಕತೆ
ಹೂಡ್ಲಮನೆ ಶಾಲೆಯ ಮಕ್ಕಳು ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ಅಲ್ಲಿಯ ವಿಶೇಶಗಳಾದ ಕಲಿಕಾ ಕೊಠಡಿಗಳು, ಗಣಿತದ ಪ್ರಾತ್ಯಕ್ಷಿಕೆಗಳು, ಕಲಿಕಾಕಾನು, ಇಂಗ್ಲೀಷ್ ಕಾರ್ನರ್, ಬಿಸಿಯೂಟದ ಕೋಣೆ, ತರಕಾರಿ ಹಿತ್ತಲುಗಳ ಬಗ್ಗೆ ಹೇಳುತ್ತಾ ಹೋದರೆ ಕೇಳುಗರಿಗೆ ರೋಮಾಂಚನವಾಗುತ್ತದೆ. ಹೀಗೆ ಕೇಳಿ,ನೋಡಿ ರೋಮಾಂಚನಗೊಳ್ಳುವಂತೆ ಸಿದ್ಧವಾಗಿರುವ ಈ ಶಾಲೆಯ ಶಾಲಾ ಮೇಲು ಉಸ್ತುವಾರಿ ಸಮೀತಿ ಮತ್ತು ಶಿಕ್ಷಕರು ಹಾಗೂ ಸ್ಥಳಿಯರ ಶ್ರಮ, ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎನ್ನುವುದಾದರೆ ಇಂಥ ಮಾದರಿ ಶಾಲೆ ಪ್ರತಿ ಗ್ರಾಮದಲ್ಲೂ ಇರುವ ಸಾಧ್ಯತೆ ಇದೆ. ಇಂಥ ಸಾಧ್ಯತೆ ತೋರಿಸಿರುವ ಹೂಡ್ಲಮನೆ ಶಾಲೆಯ ಅಭಿವೃದ್ಧಿಯ ಹಿಂದಿನ ಶಕ್ತಿಗಳು ಪ್ರಶಂಸೆಗೆ ಅರ್ಹರು.
ಕನ್ನಡಿಗರ ಇಂಗ್ಲೀಷ್ ಭಾಷಾ ವ್ಯಾಮೋಹ, ಕಾನ್ವೆಂಟ್ ಗಳ ಭ್ರಾಂತಿಯ ನಡುವೆ ಕನ್ನಡ ಭಾಷೆ,ಕನ್ನಡ ಶಾಲೆಗಳ ಸ್ಥಿತಿ ನೋಡಿ ಮರುಗದ ನೈಜ ಕನ್ನಡಿಗರಿಲ್ಲ. ಆದರೆ ಶಾಲೆಯೊಂದು ಭಾಷೆಗಳ ಕಲಿಕೆಯ ಕೇಂದ್ರವಾಗಿ,ಉತ್ತಮ ಶಿಕ್ಷಣ ಭೋದನೆಯ ಸ್ಥಳವಾಗಬಲ್ಲದೆನ್ನುವುದಕ್ಕೆ ಸಿದ್ಧಾಪುರ ತಾಲೂಕಿನ ಹೂಡ್ಲಮನೆಯ ಶಾಲೆ ಉದಾಹರಣೆ. ಹೂಡ್ಲಮನೆಯೆಂದರೆ ನಗರಕ್ಕೆ ತಾಕಿಕೊಂಡಿರುವ ಪ್ರದೇಶದ ನಗರದ ಶಾಲೆಯೆಂದು ತಿಳಿದರೆ ನಿಮ್ಮ ಗೃಹಿಕೆ ತಪ್ಪು ಈ ಶಾಲೆ ತಾಲೂಕು ಕೇಂದ್ರ ಸಿದ್ಧಾಪುರದಿಂದ 40 ಕಿ.ಮೀ. ದೂರದಲ್ಲಿದೆ.
ಈ ಶಾಲೆಗೆ ತನ್ನ ಶೈಕ್ಷಣಿಕ ಜಿಲ್ಲೆಯ ಶಿರಸಿ ತಾಲೂಕು ಕೇಂದ್ರಕ್ಕಿಂತ ತುಸು ಹತ್ತಿರ ಆದರೆ ಕುಗ್ರಾಮದಂಥ ಈ ಶಾಲೆ ಈಗ ಜಿಲ್ಲೆ, ರಾಜ್ಯ,ದೇಶವ್ಯಾಪಿ ಜನರ ಗಮನ ಸೆಳೆಯುತ್ತಿದೆ. ಈ ಶಾಲೆಯ ವಿಶೇಶವೆಂದರೆ ಇದು ಶುದ್ಧ ಕನ್ನಡ ಮಾಧ್ಯಮದ ಹಳ್ಳಿ ಪ್ರಾಥಮಿಕ ಶಾಲೆಯಾದರೂ ಇಲ್ಲಿಯ ವಿದ್ಯಾರ್ಥಿಗಳು ಅರಳು ಹುರಿದಂತೆ ಪಟಪಟನೆ ಆಂಗ್ಲಭಾಷೆಯಲ್ಲಿ ಮಾತನಾಡುತ್ತಾರೆ.
ಇಲ್ಲಿರುವ ಆಂಗ್ಲ ಶಿಕ್ಷಕಿ ಶಾಲೆಯ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಸಿದರೆ ಶಾಲೆಯ ನಂತರ ಆಸಕ್ತ ಮಹಿಳೆಯರಿಗೂ ಇಂಗ್ಲೀಷ್ ಕಲಿಸುವ ಮೂಲಕ ಈ ಹಳ್ಳಿಜನರೂ ತಮ್ಮ ಮಕ್ಕಳಂತೆ ಇಂಗ್ಲೀಷ್ ಮಾತನಾಡುವುದನ್ನು ಕೇಳುತಿದ್ದಾರೆ.
ವಿದ್ಯಾರ್ಥಿಗಳು ವಿಜ್ಞಾನ ಮತ್ತು ಸಸ್ಯಶಾಸ್ತ್ರೀಯ ಮಾಹಿತಿಯನ್ನು ತಿಳಿಯಲು ಈ ಶಾಲೆಯಲ್ಲಿ ಕಲಿಕಾಕಾನು ನಿರ್ಮಿಸಲಾಗಿದೆ.ಈ ಕಲಕಾಕಾನಿನಲ್ಲಿ ನಿಂತು,ಕುಳಿತು,ಕುಣಿಯುತ್ತಾ ವಿದ್ಯಾರ್ಥಿಗಳು ಪರಿಸರ, ವಿಜ್ಞಾನದ ಪಾಠ ಕಲಿಯುತ್ತಾರೆ. ಈ ಕಲಿಕಾ ಕಾನಿನ ರೂವಾರಿ ಬಾಲಚಂದ್ರ ಸಾಯಿಮನೆ ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಶಿಕ್ಷಕರ ಸಹಕಾರ ಸರ್ಕಾರದ ಅರಣ್ಯ ಇಲಾಖೆಯ ಅನುಕೂಲಪಡೆದು ಈ ಕಲಿಕಾಕಾನನ್ನು ನಿರ್ಮಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸರಳವಾಗುತ್ತದೆ ಎನ್ನುವುದು ಇಲ್ಲಿಯ ವಿಜ್ಞಾನ ಶಿಕ್ಷಕ ಜಿ.ಎಂ.ನಾಯ್ಕ ಹೇಳಿಕೆ.
ಹೀಗೆ ಮಾದರಿ ಕನ್ನಡ ಶಾಲೆ, ವಿಶಿಷ್ಟ ಕಲಿಕೆಯ ಮಾದರಿ ಶಾಲೆ ಮಾಡುವ ಹಿಂದೆ ಈ ಗ್ರಾಮದ ನಾಗರಿಕರು, ಶಾಲೆಯ ಮಕ್ಕಳ ಪಾತ್ರ ದೊಡ್ಡದಿದೆ. ಒಂದು ದಶಕದ ಹಿಂದೆ ಶಾಲೆಯ ಅಭಿವೃದ್ಧಿಗಾಗಿ ಸಾರ್ವಜನಿಕ ವಂತಿಕೆ ಸಂಗ್ರಹಕ್ಕೆ ತೊಡಗಿದಾಗ ಅಗತ್ಯಕ್ಕಿಂತ ಹೆಚ್ಚು ಹಣ ಸಂಗ್ರಹವಾಯಿತು. ಈ ಹಣದಿಂದ ಶಾಲಾಉಪಯೋಗಿ ವ್ಯವಸ್ಥೆ ನಿರ್ಮಿಸುವ ಹಿನ್ನೆಲೆಯಲ್ಲಿ ಒಂದೊಂದೆ ವ್ಯವಸ್ಥೆ ರೂಪಿಸುತ್ತಾ ಈಗ ಈ ಶಾಲೆಯ ಸಕಲ ವ್ಯವಸ್ಥೆಗಳೂ ಮಾದರಿಯಾಗಿ ಮೈತಳೆದಿವೆ. ಈ ಶಾಲೆಯ ಅಭಿವೃದ್ಧಿಗೆ ಮನಸು ಮಾಡಿದ ಸ್ಥಳಿಯರಿಗೆ ಅವರ ಆಸಕ್ತಿಗೆ ಪೂರಕವಾದ ಶಿಕ್ಷಕರ ಸಮೂಹವೂ ಜೊತೆಯಾಗಿದೆ.
ನಾಲ್ಕೈದು ಶಿಕ್ಷಕರಲ್ಲಿ ಪ್ರತಿಯೊಬ್ಬರಿಗೂ ಜಿಲ್ಲೆ,ರಾಜ್ಯ,ರಾಷ್ಟ್ರಮಟ್ಟದ ಪ್ರಶಸ್ತಿಗಳು ಹುಡುಕಿ ಬಂದಿವೆ. ಈ ಪ್ರಶಸ್ತಿಗಳ ಹಿಂದಿನ ಸಾಧನೆ ಕೀರ್ತಿಗೆ ಅವಕಾಶ ಅನುಕೂಲ ಮಾಡಿಕೊಟ್ಟ ಹೂಡ್ಲಮನೆ ಶಾಲೆಯ ಪಾಲಕರು, ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮೀತಿಯಿಂದಾಗಿ ಈ ಶಾಲೆ ಈಗ ರಾಜ್ಯಮಟ್ಟದಲ್ಲಿ ಹೆಸರುಮಾಡಿದೆ. ಈ ಭಾಗದ ಗರಿಷ್ಟ ಆಸ್ತಿಕರು ಈ ಶಾಲೆಯನ್ನೇ ಜ್ಞಾನಮಂದಿರ ಎಂದು ತಿಳಿದು ಆರಾಧಿಸುತ್ತಾ ಸಹಕರಿಸುತಿದ್ದಾರೆ. ಇದರ ಪರಿಣಾಮವಾಗಿ ಇಲ್ಲಿ ಸಮಾಜವಿಜ್ಞಾನ,ಇಂಗ್ಲೀಷ್ ಕಲಿಕೆಗಳಿಗೆ ಪ್ರತ್ಯೇಕ ಕೋಣೆಗಳು, ವಿಜ್ಞಾನ, ಪರಿಸರಕ್ಕೆ ಕಲಿಕಾಕಾನು, ಹಿತ-ಮಿತದ ಬಿಸಿಯೂಟಕ್ಕೆ ತರಕಾರಿ ಬೆಳೆಯುವ ಹಿತ್ತಲು ಹೀಗೆ ವಿದ್ಯಾರ್ಥಿಗಳು ನಲಿಯುತ್ತಾ ಕಲಿಯಲು ಎಷ್ಟು ಪೂರಕ ವಾತಾವರಣ ಬೇಕೋ ಅಷ್ಟು ಶಿಸ್ತುಬದ್ಧ ವ್ಯವಸ್ಥೆ ಮಾಡುವಲ್ಲಿ ಈಶಾಲೆಯ ಅಭಿಮಾನಿಗಳು ಸಹಕರಿಸಿದ್ದಾರೆ. ಇದಕ್ಕೆ ಪೂರಕವಾಗಿ ವರ್ಷಕ್ಕೊಮ್ಮೆ ನಡೆಯುವ ಇಲ್ಲಿಯ ಹಳ್ಳಿಹಬ್ಬ ಈ ಶಾಲೆಯ, ಹೂಡ್ಲಮನೆ ಗ್ರಾಮದ ಹಳೆ ವಿದ್ಯಾರ್ಥಿಗಳು ಸ್ಥಳಿಯರನ್ನು ಸೇರಿಸಲೂ ಈ ಶಾಲೆ ಸ್ಥಳಾವಕಾಶ ನೀಡಿದೆ. ಇಂಥ ಸಕಲ ವ್ಯವಸ್ಥೆ, ಪೂರಕ ವಾತಾವರಣದಿಂದಾಗಿ ಈ ಭಾಗದ ಮಕ್ಕಳು ಹಳ್ಳಿಯಿಂದ ಪೇಟೆಗೆ ಇಂಗ್ಲೀಷ್ ಮಾಧ್ಯಮ ಹುಡುಕಿ ಹೋಗುವುದಿಲ್ಲ
ಬದಲಾಗಿ ಇಲ್ಲಿಗೆ ಪೇಟೆಯಿಂದಲೂ ಬರುತ್ತಾರೆ. ಇಂಥ ಶಾಲೆ ಮತ್ತು ಶಿಕ್ಷಕರ ಪ್ರಯತ್ನದಿಂದ ಹೂಡ್ಲಮನೆ ಶಾಲೆ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವುದಕ್ಕೆ ಸ್ಥಳಿಯರಿಗೆ ಹೆಮ್ಮೆ ಇದೆ. ಸಹಕಾರ,ಹೊಂದಾಣಿಕೆಯಿಂದ ಸಾಧ್ಯವಾಗಿರುವ ನಮ್ಮ ಶಾಲೆಯ ಅಭಿವೃದ್ಧಿಯ ಸಾಧನೆ ನಮ್ಮಲ್ಲಿ ಪರಸ್ಪರ ಗೌರವ,ಸಂಬಂಧಗಳ ವೃದ್ಧಿಗೂ ಕಾರಣವಾಗಿದೆ ಎನ್ನುತ್ತಾರೆಅವರು. ಹೀಗೆ ಹೂಡ್ಲಮನೆಯ ಶಾಲೆಯ ಮೇಲುಉಸ್ತುವಾರಿ ಸಮೀತಿ ಮಾಡಿರುವ ಕೆಲಸ, ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಅಧಿಕಾರಿಗಳು ಹಿರಿಯ ಅಧಿಕಾರಿಗಳು, ಸಚಿವರು ಬರುವಾಗ ಈ ಶಾಲೆಗೇ ಕರೆತರುತ್ತಾರೆ. ಇದರಿಂದಾಗಿ ಅಧಿಕಾರಿಗಳು, ಮಂತ್ರಿಮಹೋದಯರಿಗೂ ಒಂದು ಶಾಲೆಯನ್ನೂ ಹೀಗೂ ಕಟ್ಟಬಹುದು ಎನ್ನುವ ಕಲ್ಪನೆ ಒಡಮೂಡುತ್ತದೆ.
ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ತನ್ನ ವಿಶಿಷ್ಟತೆಯಿಂದ ಹೆಸರು ಮಾಡುತ್ತಿರುವ ಈ ಹೂಡ್ಲಮನೆ ಕನ್ನಡ ಶಾಲೆ ಸಿದ್ದಾಪುರ ತಾಲೂಕು ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗೂ ಹೊಸ ಗರಿ ಮೂಡಿಸಿದೆ. ಇಂಥ ವ್ಯವಸ್ಥೆಗಳಿಲ್ಲದ ಶಾಲೆಗಳೇ ಹೆಚ್ಚಿರುವ ಸಿದ್ಧಾಪುರ ತಾಲೂಕು ರಾಜ್ಯಕ್ಕೆ ಹೆಚ್ಚಿನ ಫಲಿತಾಂಶ ನೀಡಿ ರಾಜ್ಯದ ನಂ1 ತಾಲೂಕಾಗಿದೆ. ಎಲ್ಲಾ ಶಾಲೆಗಳೂ ಹೂಡ್ಲಮನೆ ಶಾಲೆಯಂತಾದರೆ ಮಕ್ಕಳಷ್ಟೇ ಅಲ್ಲ, ಪಾಲಕರು, ಸ್ಥಳಿಯರೂ ಕಲಿಯಬಹುದೆನ್ನುವ ಮೆಚ್ಚುಗೆಯಲ್ಲಿ ಉತ್ಫ್ರೇಕ್ಷಯಂತೂ ಇಲ್ಲ.
![](https://i0.wp.com/samajamukhi.net/wp-content/uploads/2020/02/20191210_130234-scaled.jpg?fit=760%2C570&ssl=1)
![](https://i2.wp.com/samajamukhi.net/wp-content/uploads/2020/02/20191210_130305-scaled.jpg?fit=760%2C570&ssl=1)
![](https://i0.wp.com/samajamukhi.net/wp-content/uploads/2020/02/20191210_125614-scaled.jpg?fit=760%2C570&ssl=1)
![](https://i0.wp.com/samajamukhi.net/wp-content/uploads/2020/02/20191210_121418-scaled.jpg?fit=760%2C570&ssl=1)
![](https://i0.wp.com/samajamukhi.net/wp-content/uploads/2020/02/20191210_113116-scaled.jpg?fit=760%2C570&ssl=1)
![](https://i1.wp.com/samajamukhi.net/wp-content/uploads/2020/02/20191210_122753-scaled.jpg?fit=760%2C570&ssl=1)
![](https://i0.wp.com/samajamukhi.net/wp-content/uploads/2020/02/20191210_125349-scaled.jpg?fit=760%2C570&ssl=1)
![](https://i1.wp.com/samajamukhi.net/wp-content/uploads/2020/02/cal_2020_copy.jpg?fit=760%2C475&ssl=1)
![](https://i2.wp.com/samajamukhi.net/wp-content/uploads/2020/02/IMG-20200213-WA0065-2.jpg?fit=760%2C456&ssl=1)
![](https://i0.wp.com/samajamukhi.net/wp-content/uploads/2020/02/IMG-20200213-WA0066.jpg?w=760&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)