ಕ್ಯಾನ್ಸರ್ ನೋವು ಮರೆಸಿದ ಕವಿತೆ..


ಬಾದಾಮಿಯ ಕಾರುಡಿಗಿಮಠ ಆಸ್ಪತ್ರೆಯಲ್ಲಿ ಅವ್ವನಿಗೆ ರಕ್ತ, ಮೂತ್ರ ಪರೀಕ್ಷೆ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಿದ್ಮೇಲೆ ರಾಜೇಶ್ ನಾಯ್ಕ ಅನ್ನೊ ವೈದ್ಯರು ನನಗೆ ‘ಆ ಎಲ್ಲ ರಿಪೋಟ್ರ್ಸ ಪಡೆದುಕೊಂಡು ಭೇಟಿಯಾಗ್ರಿ’ ಅಂತಾ ಹೇಳಿದ್ರು. ಒಂದಂರ್ಧ ಗಂಟೆಯಲ್ಲಿ ಎಲ್ಲ ರಿಪೋರ್ಟ್‍ಗಳನ್ನು ಕಲೆಹಾಕಿಕೊಂಡು ವೈದ್ಯರನ್ನು ಕಂಡೆ, ಎಲ್ಲವನ್ನು ಪರಿಶೀಲಿಸಿ ‘ನಿಮ್ಮ ತಾಯಿಗೆ ಕ್ಯಾನ್ಸರ್ ಆಗಿದೆ, ಅದು ಥರ್ಡಸ್ಟೇಜನಲ್ಲಿದೆ.’ ಅಂತಾ ಹೇಳಿದಾಗ ಆಕಾಶವೇ ಹರಿದು ತಲೆಯ ಮೇಲೆ ಬಿದ್ದಂತಾಯಿತು. ಮಾತು ಬಾರದೆ ತಡವರಿಸುವುದನ್ನು ನೋಡಿದ ವೈದ್ಯರು ‘ಧೈರ್ಯವಾಗಿರಿ ಸದ್ಯ ಈ ಕಾಯಿಲೆಗೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲ, ಆದರೆ ಬಾಗಲಕೋಟ ಅಥವಾ ಹುಬ್ಬಳ್ಳಿಯಲ್ಲಿ ರೇಡಿಯೋ ಥೇರೆಪಿ ಹಾಗೂ ಕೀಮೋ ಥೇರೆಪಿ ಅಂತಾ ಚಿಕಿತ್ಸೆ ಇದೆ ಕೊಡ್ಸಿ’ ಅಂತಾ ಒಂದು ಪತ್ರ ಬರೆದು ಆ ರಿಪೋಟ್ರ್ಸಗೆ ಲಗತ್ತಿಸಿ ಮರಳಿಸಿದರು.


ಒತ್ತರಿಸಿ ಬಂದ ದುಃಖವನ್ನು ಅದುಮಿಹಿಡಿದುಕೊಂಡು ಅವ್ವನೆದಿರು ವಾಸ್ತವವನ್ನು ತೆರೆದಿಡದೆ ‘ಅವ್ವ ನಾಳೆ ಬಾಗಲಕೋಟೆಗೆ ಹೋಗಿ ಅಲ್ಲಿ ನನ್ನ ಗೆಳೆಯರಿಗೆ ಪರಿಚಯವಿರುವ ಒರ್ವ ಡಾಕ್ಟರ್ ಕಂಡು ಬರೋಣ’ ಅಂತಾ ಸಮಾಧಾನ ಪಡಿಸಿ ಮನೆಗೆ ಕರೆದುಕೊಂಡು ಹೋದೆ. ಮನೆಯಲ್ಲಿ ಸ್ವಲ್ಪುಹೊತ್ತು ಕಳೆದ್ಮೇಲೆ ‘ಅಲ್ಲಾ ಇಲ್ಲಿಯ ಡಾಕ್ಟರ್ಗೆ ನನ್ನ ಜಡ್ಡು ಗೊತ್ತಾಗ್ಲಿಲ್ಲಾ ಅಂದ್ರ ಅದೆಂತಹ ಜಡ್ಡು ನಂದು?’ ಅಂತಾ ಅವ್ವ ಸಹಜವಾಗಿ ಪ್ರಶ್ನೆ ಮಾಡಿದಾಗ ಏನು ಹೇಳ್ಬೇಕಂತಾ ತೋಚದೆ ‘ನಾಳೆ ಗೊತ್ತಾಗತ್ತ ನೀ ಹೆಚ್ಚು ತಲಿಕೆಡಿಸ್ಕೊಬ್ಯಾಡ, ಸಮಾಧಾನದಿಂದ ಇರು’ ಅಂತಾ ಹೇಳಿ ನಾನು ಮನೆಯಿಂದ ಹೊರಬಂದೆ.
ಗೆಳೆಯ ಮಾಗುಂಡಪ್ಪ ಮತ್ತು ಖಾದರನ ಬಳಿ ಎಲ್ಲವನ್ನೂ ಹೇಳಿಕೊಂಡು ಅತ್ತುಬಿಟ್ಟೆ, ಅವರ ಅಂತಃಕರಣದ ಮಾತುಗಳು ನನ್ನೊಳಗೊಂದಿಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದವು. ಮರುದಿನ ಬಾಗಲಕೋಟ ಆಸ್ಪತ್ರೆಗೆ ಹೋಗಿ ಅಲ್ಲಿಯ ವೈದ್ಯರ ಜೊತೆ ಚರ್ಚಿಸಿ ರೇಡಿಯೇಶನ್ ಹಾಗೂ ಕೀಮೋಥೇರೆಪಿ ಕೊಡಿಸಲು ಒಪ್ಪಿಕೊಂಡೆ. ಅವ್ವನಿಗೆ ನಿಧಾನಕ್ಕೆ ತನ್ನ ಕಾಯಿಲೆ ಅರ್ಥವಾಯಿತು. ಆಗಾಗ ಆಸ್ಪತ್ರೆಯ ಕೌಂಟರ್ನಲ್ಲಿ ಕಟ್ಟುವ ದುಡ್ಡಿನ ಕಟ್ಟುನೋಡಿ ಅವ್ವ “ನನಗ ಆರಾಮಕ್ಕಿದ್ರಷ್ಟ ದುಡ್ಡು ಖರ್ಚ ಮಾಡು, ಇಲ್ದಿದ್ರ ಯಾಕ ಸುಮ್ನ ಅಷ್ಟೊಂದು ರೊಕ್ಕ ಹಾಳ ಮಾಡ್ತಿ?” ಅಂತಾ ಪ್ರಶ್ನೆ ಮಾಡಿದಾಗ ಉತ್ತರಿಸಲಾಗದೆ ಮೌನಕ್ಕೆ ಶರಣಾದೆ, ಆಗ ಪಿ.ಲಂಕೇಶ್‍ರು ಬರೆದ “ನನ್ನವ್ವ ಫಲವತ್ತಾದ ಕಪ್ಪುನೆಲ” ಕವಿತೆಯ ಸಾಲು ನೆನಪಾಯಿತು.
ಆಮೇಲೆ ಮೊಬೈಲ್ಗೆ ಯಾವ್ದೊ ವಾಟ್ಸಪ್ ಸಂದೇಶ ಬಂದ ಶಬ್ದ, ತೆರೆದು ನೋಡಿದಾಗ ಗೆಳೆಯ ಗಿರೀಶ ಜಕಾಪುರೆಯವರ ಕವಿತೆ ‘ಮಣ್ಣೆಂದರೇನು..?’


ಬಿರುಗಾಳಿಯೊಡನೆ ಹುಡಿಯಾಗಿ ಮೇಲೆದ್ದು, ಸುತ್ತಿ ಸುಳಿದು ಕಣ್ಣಿಗೆ ಸೇರಿದ ಕಣವೆ..? ಮಳೆಗಾಲದ ಒಂದು ಮಧ್ಯಾಹ್ನ ನೆನೆದು ಎರಚಿಕೊಂಡು ಖುಷಿಪಟ್ಟ ರಾಡಿಯೆ..? ಮಣ್ಣೆತ್ತಿನ ಅಮವಾಸ್ಸೆಯೆಂದು ಅಪ್ಪ ಮಾಡಿಕೊಟ್ಟ ಎತ್ತು ಎಂಬ ಘನವೆ..? ಜೀವದ ಗೆಳೆಯ ಸತ್ತಾಗ ದುಃಖ ಅದುಮಿಕೊಂಡು ಹೂತುಬಂದ ಭೂಗರ್ಭವೆ..? ಗೊತ್ತಿಲ್ಲ ..! ಮಣ್ಣೇಂದರೇನು? ತಾನು ಬೆಂದು ನನ್ನ ಹೊಟ್ಟೆಗೆ ರೊಟ್ಟಿ ಸುಟ್ಟುಕೊಡುವ ಕರಕಲಾಗಿ ಕಪ್ಪಿಟ್ಟ ಒಲೆಯೆ..? ಕುಂಬಾರನಿಗೆ ಬದುಕಾಗಿ ನನ್ನ ಗುಡಿಸಲಿನಲ್ಲಿ ನೀರನ್ನು ಅಮೃತವಾಗಿಸುವ ಬಿಂದಿಗಿಯೆ..? ಪುಢಾರಿಗಳಿಗೆ ಆಸ್ತಿಯಾಗಿ, ಯೋಗಿಗಳಿಗೆ ಅಸ್ತಿಯಾಗಿ, ಸೈನಿಕರಿಗೆ ತಾಯಾಗುವ ಭೌತವೆ..? ಗೊತ್ತಿಲ್ಲ..! ಮಣ್ಣೆಂದರೇನು? ಹಿತ್ತಲಿನಲ್ಲಿ ಗುಲಾಬಿಯಾಗುವ, ಮುಳ್ಳು ಜಾಜಿಯಾಗುವ ಭೇದವರಿದ ಜೀವದ್ರವ್ಯವೆ..? ಹಾಗಲಬಳ್ಳಿಯ ಕಹಿಯಾಗಿ, ಮಾವಿನಲಿ ರುಚಿಯಾಗಿ ಸಮರಸದ ಸರಳತೆಯೆ..? ಮಾಳಿಗೆಯಾಗಿ ನೆಲವಾಗಿ ಜಲವಾಗಿ ಹೊಲವಾದ ಅನ್ನದಗುಳೆ..? ಗೊತ್ತಿಲ್ಲ! ಶರೀರ ಅಶರೀರಗಳ ಆದಿ ಅಂತ್ಯವಾಗಿ ಅನಂತವಾಗಿ ಎಲ್ಲ ಸಹಿಸುವ ಸಂತನೆ..? ಹಲವಡೆ ಚರ್ಚು ಮಸೀದಿ ಗುಡಿಗಳಾಗಿ ದೊಂಬಿ ಘರ್ಷಣೆಯ ಮೂಲವೆ..? ‘ಪಾಕಿ’ಗಳು ತನ್ನದೆನ್ನುವ ನಾವು ನಮ್ಮದೆನ್ನುವ ಸ್ವರ್ಗದಡಿಯ ಗಡಿಗಳೆ..? ಗೊತ್ತಿಲ್ಲ! ಮಣ್ಣಿಂದ ಬಂದವರು, ಮಣ್ಣಲ್ಲಿ ಬೆಳೆದವರು ನಾವು. ಮಣ್ಣಲ್ಲಿ ಮಣ್ಣಾಗುವ ನಾವೆ..? ಇಲ್ಲಿಯ ಎಲ್ಲಕ್ಕೂ ಮಣ್ಣೇ ಮೂಲ ಮಣ್ಣೇ ಕೊನೆ. ಅವಿರತದ ಹುಟ್ಟು ಸಾವೆ..? ಮಣ್ಣೆಂದರೆ ಬರೀ ಮಣ್ಣಲ್ಲವೋ ಮರುಳೆ.. ಜೀವ ಅದು, ಮಣ್ಣ ಕಣ ಕಣದಲ್ಲೂ ಜೀವ ಇರುವುದರಿಂದಲೇ ಜೀವ ಹೋದ ಮೇಲೂ ನಮ್ಮನ್ನೂ ಮಣ್ಣಿಗಿಡುತ್ತಾರೆ, ಬೀಜ ಮತ್ತೆ ಮೊಳೆಯಲೆಂದು.. ಜೀವ ಚಿಗುರಲೆಂದು.’
ಬಿರು ಬೇಸಿಗೆಯಲ್ಲಿ ಸುಡುವ ಸೂರ್ಯನ ಕಿರಣಗಳ ಹೊಡೆತಕ್ಕೆ ಚಡಪಡಿಸುವ ನಾನು, ಆಸ್ಪತ್ರೆಯ ಒಳಗಡೆ ಅವ್ವ£ಗೆ ಮತ್ತೆ ಆ ಯಂತ್ರದ ಮೂಲಕ ರೇಡಿಯೆಶನ್ ಅನ್ನೊ ಶಾಕ್ ಟ್ರೀಟ್ಮೆಂಟ್ ಬೇರೆ, ಒಳಗೆ ಮತ್ತು ಹೊರಗೆ ಹಲವು ರೀತಿಯಲ್ಲಿ ಸುಟ್ಟುಕೊಳ್ಳುವ ಈ ಒದ್ದಾಟದಲ್ಲಿ ಗೆಳೆಯ ಕಳುಹಿಸಿದ ಮಣ್ಣೆಂದರೇನು..?
ಪ್ರಶ್ನಾರ್ಥಕ ಕವಿತೆಗೆ ನನ್ನವ್ವ ಅರ್ಥಪೂರ್ಣ ಉತ್ತರವಾಗಿದ್ದಾಳೆ. ಚಿಕಿತ್ಸೆಯ ಫಲವೊ..? ನನ್ನ ಸುದೈವವೊ..? ಗೊತ್ತಿಲ್ಲ ಸದ್ಯಕ್ಕಂತೂ ಗುಣಮುಖಳಾಗಿದ್ದಾಳೆ. ಗೆಳಯನ ಕವಿತೆ ಒಂದಿಷ್ಟು ನನ್ನೊಳಗೂ ನೋವ ಮರೆಸಿ, ಮಣ್ಣಿನ ಋಣ ತೀರಿಸುವ ಕಣ್ಣು ತೆರೆಸಿದೆ.
-ಕೆ.ಬಿ.ವೀರಲಿಂಗನಗೌಡ್ರ.
ಎಸ್.ಆರ್.ಜಿ.ಎಚ್.ಎಂ ಪ್ರೌಢಶಾಲೆ, ಸಿದ್ದಾಪುರ-581355. ಉ.ಕ ಜಿಲ್ಲೆ. ದೂ-9448186099.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

1 Comment

  1. ಕ್ಯಾನ್ಸರ್ ಮಹಾಮಾರಿ…. ವೈದ್ಯಲೋಕದ ತಲೆಬಿಸಿ… ರೋಗಿಯ ಸಂಬಂಧಿಕರ ಆರ್ಥಿಕ ಸ್ಥಿತಿಯನ್ನು ನಾಶ ಮಾಡುವ ಕೆಟ್ಟ ಖಾಯಿಲೆ…. ಯಾರಿಗೂ ಬಾರದಿರಲಿ ದೇವರೆ.

Leave a Reply

Your email address will not be published. Required fields are marked *