ಪ್ರಸ್ತುತ ಸಾಮಾಜಿಕ,ರಾಜಕೀಯ,ಧಾರ್ಮಿಕ ಬಿಕ್ಕಟ್ಟುಗಳಿಗೆಲ್ಲಾ ನಾರಾಯಣಗುರುಗಳ ಚಿಂತನೆ,ದಾರಿಯಲ್ಲಿಯೇ ಪರಿಹಾರವಿದೆ ಎಂದು ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಹೇಳಿದ್ದಾರೆ. ಸಿದ್ಧಾಪುರದ ಕೋಲಶಿರ್ಸಿ ಗುಡ್ಡಕೇರಿ ಮಾರಿಕಾಂಬಾ ಗೆಳೆಯರ ಬಳಗ ತಾಲೂಕು ಬಿ.ಎಸ್.ಎ ನ್.ಡಿ.ಪಿ. ಸಹಯೋಗದಲ್ಲಿ ನಡೆಸಿದ ನಾರಾಯಣ ಗುರು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದ ಅವರು
ನಾರಾಯಣ ಗುರುಗಳು ಸರಿಸುಮಾರು ಎರಡು ಶತಮಾನಗಳ ಹಿಂದೆ ಅಂದಿನ ಅಧಾರ್ಮಿಕತೆ, ಕಂದಾಚಾರ, ಶೋಷಣೆಗಳ ವಿರುದ್ಧ ಸಂಘರ್ಷಕ್ಕೆ ಇಳಿಯದೆ ಪರ್ಯಾಯ ವ್ಯವಸ್ಥೆಯ ಸ್ಥಾಪನೆಗೆ ಪ್ರಯತ್ನಿಸಿ ಗೆದ್ದರು. ಮಹಾತ್ಮಾ ಗಾಂಧಿಯವರ ಬಹುಮುಖಿ ಹೋರಾಟದಂತೆ ನಾರಾಯಣ ಗುರುಗಳ ಚಳವಳಿ ಆಗಿನ ಶೋಷಣೆ, ಜಾತ್ಯಾಂಧತೆ,ಕ್ರೂರ ನೀತಿ-ನಿಯಮಗಳ ವಿರುದ್ಧ ಹೋರಾಡುತ್ತಾ ಕೇರಳದ ಪಟ್ಟಭದ್ರರ ರಾಜಕೀಯವನ್ನು ಕಿತ್ತೆಸೆದು ಹೊಸ ಮುಂದುವರಿದ ಕೇರಳದ ಪ್ರಗತಿಗೆ ಕಾರಣವಾಯಿತು. ಆಗಿನ ಅರಸೊತ್ತಿಗೆ, ಮೇಲ್ಜಾತಿ ಪ್ರಣೀತ ಮನುವಾದದ ರೀತಿಯಲ್ಲಿಯೇ ಈಗ ಮನುವಾದ ಭಾರತವನ್ನು ಹಿಂಸಿಸುತ್ತಿದೆ. ಭಾರತವನ್ನು ಮನುವಾದಿಗಳು, ಮನುವಾದದ ಅಪಾಯದಿಂದ ಪಾರುಮಾಡಲು ಅಂದಿನ ಕೇರಳ ಮಾದರಿಯ ನಾರಾಯಣ ಗುರುಗಳ ತತ್ವ,ಆದರ್ಶಗಳ ಪಾಲನೆಯಿಂದ ಮಾತ್ರ ಸಾಧ್ಯ ಎಂದರು.
ಮನುವಾದಿಗಳು ದೇವರು ಧರ್ಮ,ಆಚರಣೆ,ನಂಬಿಕೆಗಳ ಆಧಾರದಲ್ಲಿ ಬಹುಸಂಖ್ಯಾತರನ್ನು ನಿಯಂತ್ರಿಸುತ್ತಾರೆ. ಈ ಅಸ್ತ್ರಗಳು ಅವರ ರಾಜಕೀಯ ಹತಾರಗಳು ಇವುಗಳಿಂದ ಈ ದೇಶ ಈಗ ಉಳ್ಳವರು, ಮೇಲ್ವರ್ಗದ ಜಾಗೀರಾಗಿದೆ. ಈ ಅಸಮಾನ ವ್ಯವಸ್ಥೆ ಬದಲಾಗದೆ ಭವಿಷ್ಯವಿಲ್ಲ. ಆ ಕಾಲದಲ್ಲಿ ನಾರಾಯಣ ಗುರುಗಳು ಮಾಡಿದ ಜಾದೂ ಈ ಕಾಲದಲ್ಲಿ ಹೆಚ್ಚು ಅಗತ್ಯ ಪ್ರಸ್ತುತ ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪತ್ರಕರ್ತ ನಾಗರಾಜ್ ಮಾಳ್ಕೋಡು ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಾರಾಯಣ ಗುರುಗಳ ಚಿಂತನೆ, ಹೋರಾಟದ ದಾರಿಗೆ ಹೆಚ್ಚಿನ ಒಲುವು ವ್ಯಕ್ತವಾಗುತ್ತಿದೆ ಇದರಿಂದ ಜಾಗೃತಿಯಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಬಿ.ಎಸ್.ಎನ.ಡಿ.ಪಿ. ಅಧ್ಯಕ್ಷ
ವಿನಾಯಕ ನಾಯ್ಕ ಬಿ.ಎಸ್.ಎನ್.ಡಿ.ಪಿ. ಕಾರ್ಯಚಟುವಟಿಕೆ, ಗುರಿಗಳನ್ನು ವಿವರಿಸಿದರು. ಸೋಮಶೇಖರ್ ನಾಯ್ಕ ಸ್ವಾಗತಿಸಿದ ಕಾರ್ಯಕ್ರಮಕ್ಕೆ ರವಿಕುಮಾರ್ ಕೊಠಾರಿ ನಿರೂಪಿಸಿ, ವಂದಿಸಿದರು.