
ಮಿಶ್ರ ಪ್ರತಿಕ್ರೀಯೆ-

ಸರಿಸುಮಾರು 2 ತಿಂಗಳುಗಳ ಕಾಲಾವಧಿಯ ಕರೋನಾ ಲಾಕ್ ಡೌನ್ ನಂತರ ಉತ್ತರಕನ್ನಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿ ಬೆಳಿಗ್ಗೆ 7 ರಿಂದ ಸಾಯಂಕಾಲ 7, ನಗರ ಮಧ್ಯಾಹ್ನ 1, ಮದ್ಯದಂಗಡಿಗಳಿಗೆ ಅಪರಾಹ್ನ 3 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಈ ಲಾಕ್ಡೌನ್ ಸಡಿಲಿಕೆ ಬಗ್ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಗಿದೆ. ಏನಂತಾರೆ ಜನ ಎನ್ನುವ ಕುತೂಹಲಕ್ಕೆ ಇಲ್ಲಿವೆ ಉತ್ತರ-
ಲಾಕ್ ಡೌನ್ ಮಾತ್ರ ಪರಿಹಾರವಲ್ಲ- ಶಶಿಭೂಷಣ ಹೆಗಡೆ
ಲಾಕ್ ಡೌನ್ ನಿಂದಲೇ ಕರೋನಾದಿಂದ ಬಚಾವಾಗಬೇಕೆಂದರೆ ಕನಿಷ್ಟ 2 ವರ್ಷ ಲಾಕ್ ಡೌನ್ ಮಾಡಬೇಕು. ಅದು ಸಾಧ್ಯವೆ? ಪ್ರಧಾನಮಂತ್ರಿ ಮೋದಿ ಇಟಲಿಯಲ್ಲಿ ಚಪ್ಪಾಳೆ ಹೊಡೆದರೆಂದು ಇಲ್ಲಿ ಚಪ್ಪಾಳೆ ಹೊಡೆಸುವ, ಹೂ ಸುರಿಸುವ ಅರ್ಥವಿಲ್ಲದ ವ್ಯರ್ಥ ಕಾಪಿ ಮಾಡುತಿದ್ದಾರೆ. ರೈತರ ಬೆಳೆಗಳಿಗೆ ಮಾರುಕಟ್ಟೆ ಮೌಲ್ಯವಿಲ್ಲದೆ ರೈತರು ಹತಾಶರಾಗಿದ್ದಾರೆ. ಜನರಿಂದ ದೀಪ ಹಚ್ಚಿಸಿ, ಚಪ್ಪಾಳೆ ಹೊಡೆಸಿ, ನೆರೆಹೊರೆಯವರನ್ನು ನೋಡಿಕೊಳ್ಳಲು ಹೇಳಿ, ದೇಣಿಗೆ-ದಾನ ಕೇಳಿದರೆ ಮುಗಿಯಿತೆ? ಅವರಿಂದ ಘೋಷಣೆಯಾಗಿರುವುದೇನು?
ಸಣ್ಣ-ಮಧ್ಯಮ ಉದ್ದಿಮೆಗಳ ಉದ್ಯಮಿಗಳಿಗೆ ಸಾಲದ ಕಂತು ಕಟ್ಟುವ ಸಮಯಾವಕಾಶ, ವಿದ್ಯುತ್ ಬಿಲ್ಲ ಮನ್ನಾ, ಸಮಯಾವಕಾಶ, ಏನು ನೀಡಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಸುಧಾರಣಾ ಕ್ರಮಗಳು ನಮ್ಮಲ್ಲ್ಯಾಕಿಲ್ಲ. ಜಿಲ್ಲಾ ಹಂತಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ಕರೋನಾ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆ. ಸರ್ಕಾರದಿಂದ ಜನರಿಗೆ,ಉದ್ಯಮಿಗಳಿಗೆ ರೈತರಿಗೆ ಯಾವ ಯೋಜನೆಗಳನ್ನು ಪ್ರಕಟಿಸಲಾಗಿದೆ. ತಲಾ 500 ರೂ. ಬಿಟ್ಟರೆ ಸಾರ್ವಜನಿಕರಿಗೆ ನೇರ ನೆರವು, ಅನುದಾನಗಳಿಲ್ಲ. ಲಾಕ್ ಔಟ್ ತೆರವುಗೊಳಿಸಿ ತೀವ್ರ ಶಿಸ್ತಿನ ಆರೋಗ್ಯ, ಆರ್ಥಿಕ ಕ್ರಮಗಳ ಮೂಲಕ ಸಮತೋಲನ ಕಾಪಾಡಬೇಕಿದೆ. ಲಾಕ್ ಔಟ್, ಕರೋನಾ ನಿಷೇಧಾಜ್ಞೆ, ನಿರ್ಬಂಧಗಳನ್ನು ಹೇರಿ ನಂತರ ಚೇತರಿಸಿಕೊಳ್ಳುವುದು ಹ್ಯಾಗೆ?
ಕರೋನಾ ದಿಂದ ಬಚಾವಾದ ನಂತರ ದೇಶದ ಸ್ಥಿತಿ-ಗತಿಗಳ ಮುಂದಾಲೋಚನೆ, ಅಭಿವೃದ್ಧಿ ಕ್ರಮಗಳ ಬಗ್ಗೆ ಸರ್ಕಾರ, ಸರ್ಕಾರಗಳ ಮುಖ್ಯಸ್ಥರು ಮಾತನಾಡಿದ್ದಾರೆಯೆ? ಕರೋನಾ ನಂತರದ ಅವಧಿ ಭೀಕರವಾಗುವುದನ್ನು ತಡೆಯುವ ಸುಧಾರಣಾ ಕ್ರಮಗಳನ್ನು ಪ್ರಕಟಿಸದೆ ಅನಾಹುತಕ್ಕೆ ದಾರಿಮಾಡಿಕೊಟ್ಟಂತಾಗುವುದಿಲ್ಲವೆ? ಈ ಬಗ್ಗೆ ಸರ್ಕಾರದ ಒಳ ಹೊರಗೆ ಮಾತನಾಡುವವರಿಲ್ಲ. ಜೀಹುಜೂರ್ ನಡವಳಿಕೆ ಈ ದೇಶಕ್ಕೆ ಅಪಾಯ ತಂದಿಡುವಂತಿದೆ. ಮುಂಜಾಗೃತೆ, ಮುಂದಾಲೋಚನೆಯಿಲ್ಲದ ಸರ್ಕಾರ, ನಾಯಕತ್ವ ಈ ದೇಶಕ್ಕೆ ಒಳ್ಳೆಯದನ್ನು ಮಾಡಬಹುದು ಎಂದು ನಂಬುವುದಾದರೂ ಹೇಗೆ? ರಾಹುಲ್ ಗಾಂಧಿ ಫೆ. 12 ರಂದು ಟ್ವೀಟ್ ಮಾಡಿದ ಮೇಲೆ ಎಚ್ಚೆತ್ತುಕೊಳ್ಳದ ಸರ್ಕಾರ ಮಾರ್ಚ್ನಲ್ಲಿ ದೆಹಲಿಯಲ್ಲಿ ಕಾರ್ಯಕ್ರಮ ಮಾಡಲು ವೈದ್ಯಕೀಯ ತುರ್ತುಸ್ಥಿತಿ ಇಲ್ಲ ಎಂದು ಘೋಶಿಸುತ್ತದೆ. ನಂತರ ಏನಾಯ್ತು. ಸರ್ಕಾರ ನಡೆಸುವವರಿಗೆ ಜವಾಬ್ಧಾರಿಗಳಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ. ಈಗಲೂ ಇದೇ ಉಡಾಫೆ, ವಿಳಂಬಿತ ಅಂತಿಮ ನಿರ್ಧಾರಗಳಿಂದ ಕರೋನಾ ನಂತರದ ಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸುವಂತಿವೆ. ಸರ್ಕಾರದ ನಿರ್ಧಾರಗಳು. ಯಾರದೋ ತಪ್ಪಿಗೆ ದೇಶ, ಜನ ಬೆಲೆತೆರುವಂತಾದರೆ ರಕ್ಷಿಸುವವರ್ಯಾರು? ಲಾಕ್ಡೌನ್ ಯೋಚನೆ ಬಿಟ್ಟು ವೈಜ್ಞಾನಿಕ, ಪ್ರಾಯೋಗಿಕ ಉಪಕ್ರಮಗಳ ಮೂಲಕ ಕರೋನಾ ಹಿಮ್ಮೆಟ್ಟಿಸುವ ಕೆಲಸವಾಗಬೇಕು.
– ಡಾ. ಶಶಿಭೂಷಣ ಹೆಗಡೆ, ಶಿಕ್ಷಣತಜ್ಞ,
ಒಂದು ತಿಂಗಳು ಮುಂದುವರಿಸಬೇಕಿತ್ತು -ನಾಗರಾಜ್ ಕೆ.ಜಿ.
ಶಾಲಾ ಮಕ್ಕಳು, ಸಾಮೂಹಿಕ ಚಟುವಟಿಕೆಗಳಿಗೆ ತೊಂದರೆ ಬಿಟ್ಟರೆ ಸಾರ್ವಜನಿಕರು ತಮ್ಮ ಜೀವನಾವಶ್ಯಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಲಾಕ್ಡೌನ್ ತೆರವಾಗಬೇಕಾದ ಅವಶ್ಯಕತೆ ಇದ್ದುದು ಸಾರಾಯಿ, ಗುಟಕಾ, ಸಿಗರೇಟ್ ಮಾರುವವರು, ಓ.ಸಿ. ಇಸ್ಪೀಟ್ ಆಡುವವರಿಗೆ ಮಾತ್ರ. ಲಾಕ್ ಡೌನ್ ಸಡಿಲಿಕೆ, ಹೊರದೇಶಗಳಿಂದ ಜನರನ್ನು ಕರೆಸಿಕೊಳ್ಳುತ್ತಿರುವುದರಿಂದ ಮತ್ತೆ ಕರೋನಾದ ಅಪಾಯ ಹೆಚ್ಚಿ ಸ್ಥಳೀಯರಿಗೇ ತೊಂದರೆ. ವಿದೇಶಕ್ಕೆ ಕೆಲಸಕ್ಕೆ ಹಣ ಮಾಡಲು ಹೋದವರು ದೇಶಕ್ಕೆ ಆಪತ್ತಿದೆ ಎಂದರೆ ಬರುತ್ತಿರಲಿಲ್ಲವೇನೋ? ಈಗ ತಮ್ಮ ಹಿತಾಸಕ್ತಿಗಾಗಿ ಅವರಿಗೆಲ್ಲಾ ದೇಶ-ಊರು ನೆನಪಾಗಿದೆ. ಎಲ್ಲದಕ್ಕಿಂತ ಹಣ ಮುಖ್ಯವಲ್ಲ. ನಮ್ಮ ಕೋವಿಡ್ ಕಾರ್ಯಕರ್ತರು ಪರಿಶ್ರಮದಿಂದ ಕರೋನಾ ವಿಸ್ತರಿಸುವುದನ್ನು ತಡೆದಿದ್ದಾರೆ. ಸರ್ಕಾರ ಏಕಾಏಕಿ ಹೊರದೇಶಗಳಿಂದ,ರಾಜ್ಯಗಳಿಂದ ಜನರನ್ನು ಕರೆಸುವುದು, ಜನರಿಗೆ ಅನಾವಶ್ಯಕ ಓಡಾಟಕ್ಕೆ ಅವಕಾಶ ನೀಡುವುದು ಇವೆಲ್ಲಾ ಅಪಾಯಕ್ಕೆ ಆಹ್ವಾನವಷ್ಟೇ .ವೈಯಕ್ತಿಕ ಮತ್ತು ಕಾನೂನು ನಿಯಂತ್ರಣಗಳ ಮೂಲಕ ಕರೋನಾ ರೋಗದ ವಿರುದ್ಧ ಗೆಲ್ಲಬೇಕು. ಹೊರ ರಾಜ್ಯ, ದೇಶಗಳಿಂದ ಬಂದವರನ್ನು ಒಂದು ತಿಂಗಳು ಕಡ್ಡಾಯ ಕಾರಂಟೈನ್ ಮಾಡುವುದು,ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಅನಿವಾರ್ಯ ಓಡಾಟಕ್ಕೆ ಮಾತ್ರ ಅವಕಾಶ ಕೊಟ್ಟು ಲಾಕ್ ಔಟ್ ವಿಸ್ತರಿಸುವುದರಿಂದ ಮಾತ್ರ ಕರೋನಾದಿಂದ ಮುಕ್ತರಾಗಬಹುದಷ್ಟೆ – ಕೆ.ಜಿ.ನಾಗರಾಜ್ (ಅಧ್ಯಕ್ಷರು, ಎ.ಪಿ.ಎಂ.ಸಿ. ಸಿದ್ಧಾಪುರ)
ಗ್ರಾಮೀಣ ಪ್ರದೇಶ ಮುಕ್ತವಾಗಿರಲಿ – ಗ್ರಾಮೀಣ ಪ್ರದೇಶದಲ್ಲಿ ಲಾಕೌಟ್ ಸಡಿಲಿಕೆ ಮಾಡಿದ್ದು ಸರಿ. ಅಲ್ಲಿ 12 ಗಂಟೆ ಅವಕಾಶ ಕೊಟ್ಟ ನಂತರ ನಗರದಲ್ಲಿ ಬೆಳಿಗ್ಗೆ ಲಾಕ್ ಡೌನ್ ಸಡಿಲಿಕೆ ಯಾಕೆ? ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಿದ ಮೇಲೆ ಅವರ್ಯಾಕೆ ನಗರಕ್ಕೆ ಬರಬೇಕು. ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದು ತಪ್ಪು.
ಬೇರೆ ಅಗತ್ಯ ವಸ್ತುಗಳು 1 ಗಂಟೆಯವರೆಗೆ ಮಾತ್ರ ನೀಡುವುದಾದರೆ ಮದ್ಯ ಮಾರಾಟಕ್ಕ್ಯಾಕೆ 3 ಗಂಟೆಗಳ ವರೆಗೆ ಸಮಯಾವಕಾಶ? ಬೆಳಿಗ್ಗೆ 7 ರಿಂದ 12 ರ ಒಳಗೆ ಮದ್ಯ ಮಾರಾಟವನ್ನೂ ಮಿತಿಗೊಳಿಸಬೇಕು. ಲಾಕ್ ಡೌನ್ ತೆರವಿನಿಂದ ಅಪಾಯವಿದೆ. ಲಾಕ್ಡೌನ್, ವೈಯಕ್ತಿಕ ಅಂತರ, ನಿಯಂತ್ರಣ ಸಾಧಿಸದಿದ್ದರೆ ಅಮೇರಿಕಾ, ಫ್ರಾನ್ಸ್ ರೀತಿ ಬೆಲೆತೆರಬೇಕಾಗಬಹುದೆಂಬ ಕನಿಷ್ಟ ಕಲ್ಪನೆಯಾದರೂ ಜನರಿಗಿರಬೇಕು.
-ಇಲಿಯಾಸ್ ಶೇಖ್ ( ಉ.ಕ. ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ)
ಲಾಕ್ ಡೌನ್ ಸಡಿಲಿಕೆ ಬೇಡ
ಲಾಕ್ ಡೌನ್ ಸಡಿಲಿಕೆ ಸರಿಯಲ್ಲ, ದಾವಣಗೆರೆ, ಹಾವೇರಿ ಸ್ಥಿತಿ ನೆನಪಿಸಿಕೊಂಡರೆ ಭಯವಾಗುತ್ತದೆ. ಉತ್ತರ ಕನ್ನಡ, ಶಿವಮೊಗ್ಗಗಳಲ್ಲೂ ಲಾಕ್ ಡೌನ್ ಮುಂದುವರಿಸಬೇಕು. ಸಾಗರದಲ್ಲಿ ನಿರ್ಬಂಧಗಳಿರಲಿಲ್ಲ ನಾವೇ ಹೇಳಿ ತಾಳಗುಪ್ಪಾದಲ್ಲಿ ಮಧ್ಯಾಹ್ನದ ನಂತರ ಅಂಗಡಿ ತೆರೆಯದಂತೆ ಷರತ್ತು ವಿಧಿಸಿದ್ದೇವೆ. ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದರಿಂದ ಅಪಾಯ ಹೆಚ್ಚು.
-ಮಂಜುನಾಥ ನಾಯ್ಕ ಮನ್ಮನೆ, ಕಿರಾಣಿ ವ್ಯಾಪಾರಿ.
ಲಾಕ್ ಡೌನ್ ಮುಂದುವರಿಸಿ
ಜೂನ್ ಕೊನೆಯ ವರೆಗೂ ಲಾಕ್ ಡೌನ್ ಮುಂದುವರಿಸಬೇಕು. ಹೊರಗಿನಿಂದ ಬಂದವರಿಂದಲೇ ಕರೋನಾ ಅಪಾಯ ಹೆಚ್ಚು. ಮದ್ಯದಂಗಡಿಗಳಲ್ಲಿ ಮದ್ಯ ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದು ತಪ್ಪು. ಮದ್ಯ ವ್ಯಸನಿಗಳಿಂದ ಗಲಾಟೆಗಳಾಗುತ್ತಿವೆ. ಗ್ರಾಮೀಣ-ನಗರ ಪ್ರದೇಶಗಳಿಗೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸಿದಂತೆ ಮದ್ಯವನ್ನೂ ಮನೆ ಬಾಗಿಲಿಗೆ ತಲುಪಿಸಿ ಮಾರಾಟ ಮಾಡಲಿ.ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿ, ಹೊರಗಿನವರನ್ನು ಒಳ ತಂದು ಸ್ಥಳಿಯರಿಗೆ ಆತಂಕ ಹೆಚ್ಚುವಂತೆ ಮಾಡಿದೆ. -ವಸಂತ ನಾಯ್ಕ, ತಾ.ಪಂ. ಮಾಜಿ ಸದಸ್ಯ
ಲಾಕ್ಡೌನ್ ಸಡಿಲಿಕೆ ಸರಿ ಆದರೆ….- ಲಾಕ್ ಡೌನ್ ಸಡಿಲಗೊಳಿಸಿರುವುದರಿಂದ ಜನರಿಗೆ ಅನುಕೂಲವಾಗಿದೆ, ಆದರೆ ಅಗತ್ಯ-ಅನಿವಾರ್ಯ ವಸ್ತುಗಳ ಮಾರಾಟದ ಜೊತೆಗೆ ಸಂಪೂರ್ಣ ಲಾಕ್ ಔಟ್ ಸಡಿಲಿಕೆ ಸರಿಯಾದರೂ ಅದರಿಂದ ಅಪಾಯ ಹೆಚ್ಚು. ಹಿಂದಿನಂತೆ ಕೃಷಿ-ವೈದ್ಯಕೀಯ ಅನಿವಾರ್ಯತೆ ಬಿಟ್ಟು ಲಾಕ್ ಔಟ್ ವಿಸ್ತರಿಸುವುದೇ ಸೂಕ್ತ. ಜನರು ಸ್ವಯಂ, ವೈಯಕ್ತಿಕ,ಕಾನೂನು ನಿಯಂತ್ರಣಕ್ಕೆ ಒಳಪಡದಿದ್ದರೆ ಲಾಕ್ಡೌನ್ ಸಡಿಲಿಕೆ ಮಾರಕವಾಗುವ ಅಪಾಯ ತಳ್ಳಿಹಾಕುವಂತಿಲ್ಲ. – ಆರ್.ಜಿ.ನಾಯ್ಕ ಬಸವನಬೈಲ್, (ಮಾಜಿ ಸೈನಿಕ)





_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
