ಸಿದ್ದಾಪುರ: ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಫಲಿತಾಂಶಕ್ಕೆ ಕಾರಣಿಕರ್ತರಾದ ಶಿಕ್ಷಕರನ್ನು ಕಾನಗೋಡ ಗ್ರಾಮ ಪಂಚಾಯ್ತಿ ವತಿಯಿಂದ ಸನ್ಮಾನಿಸುವ ಮೂಲಕ ಮಾದರಿ ಹೆಜ್ಜೆ ಇಟ್ಟಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸಂದೇಶ ಬೋರ್ಕರ್, ಮೇಘನಾ ನಾಯ್ಕ, ಫರಿನ್ ಬಾನು, ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್.ಭಟ್, ಶಿಕ್ಷಕರಾದ ಕಾಂಚನಾ ಕಾಮತ್, ಎಂ.ವಿ.ನಾಯ್ಕ, ಕೇಶವ ಹೆಗಡೆ, ಸಂಧ್ಯಾ ಭಟ್, ಅನಿತಾ ಹೆಗಡೆ, ಹಾಲೇಶ್ ಬಿ.ಆರ್., ಸತೀಶ ಹೆಗಡೆ, ಮಂಜುನಾಥ ಹಟ್ಟಿ, ಆರ್.ಆರ್.ನಾಯ್ಕ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಾ ಪಂಚಾಯ್ತಿ ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ದಿನೇಶ್ ಡಿ ಮಾತನಾಡಿ, ಅಂಕಗಳ ಜತೆಗೆ ನೈತಿಕ ಶಿಕ್ಷಣ ಹಾಗೂ ಸವಾಲುಗಳನ್ನು ಎದುರಿಸುವ ಶಿಕ್ಷಣ ನೀಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಮಾತನಾಡಿ, ಶಿಕ್ಷಣ ಕ್ಷೇತ್ರದ ಸಾಧನೆ ನಿರಂತರವಾಗಿರುತ್ತದೆ. ಕಾನಗೋಡ ಗ್ರಾಮ ಪಂಚಾಯ್ತಿಯ ಈ ಕಾರ್ಯ ಉಳಿದ ಪಂಚಾಯ್ತಿಗಳಿಗೆ ಪ್ರೇರಣೆಯಾಗಬೇಕು. ಮಕ್ಕಳು ಪರೀಕ್ಷೆ ಹಾಗೂ ಅಂಕಕ್ಕಾಗಿ ಓದ ಬೇಡಿ. ಓದಬೇಕು ಎಂದು ಓದಿ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಕೆ.ಶಿವಾನಂದ ಮಾತನಾಡಿ, ಮಕ್ಕಳಲ್ಲಿ ಸ್ಪಷ್ಟ ಗುರಿಯಿರಬೇಕು. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಬೇಕು. ಬಡ ಕೂಲಿಕಾರರ ಮಕ್ಕಳು ಅಧ್ಯಯನ ಮಾಡುತ್ತಿರುವ ಕಾನಗೋಡ ಸರ್ಕಾರಿ ಶಾಲೆಗೆ ಹೆಚ್ಚಿನ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿಗಳು ಶಾಲೆಯ ಕೀರ್ತಿಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳಗಬೇಕು ಎಂದರು.
ಈ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ದೇವರಾಜ ತೆವಳ್ಳಕ್ಕನವರ್, ಪಿಡಿಓ ರಾಜಾರಾಮ ಭಟ್, ಸದಸ್ಯರಾದ ಶಿವರಾಯ ಕೊತ್ವಾಲ್, ವೀಣಾ ನಾಯ್ಕ, ರುಜಾರೋ ಪುಡ್ತಾಡೋ, ಕೃಷ್ಣಮೂರ್ತಿ ನಾಯ್ಕ, ಮಾದೇವಿ ಮೇದಾರ, ಲೀಲಾವತಿ ತಳವಾರ್, ಮಾಜಿ ಅಧ್ಯಕ್ಷ ಕೇಶವ ನಾಯ್ಕ ಉಪಸ್ಥಿತರಿದ್ದರು.