ನಾವು ಸೋತವರ ಪಕ್ಷ!

Coffee ವಿತ್ ಜಿ. ಟಿ

ಇದು sslc ರಿಸಲ್ಟ್. ಪಾಸ್ ಆದವರಿಗೆ ಎಂದಿನಂತೆ ಮೆಚ್ಚುಗೆ. ಕಡಿಮೆ ಅಂಕ ಬಂದು ಫೇಲ್ ಆದವರು ದೃತಿಗೆಡಬೇಕಾಗಿಲ್ಲ. ನಾನು sslc ಫೇಲ್ ಆಗಿದ್ದೆ. ಬದುಕು ದೊಡ್ಡದು ಸೋಲುಗಳನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡು ಹಠ ಹೊತ್ತು ಸಾಧಿಸುವ.
‘ ಅಪ್ಪಯ್ಯ ‘ ಪುಸ್ತಕದ ಈ ಬರಹ ಪುನಃ ನಿಮ್ಮ ಓದಿಗೆ…..

ಅಪ್ಪಯ್ಯ…..

ನಾನು ಸೋತವರ ಕಡೆ… ಏಕೆಂದರೆ….

ದೊಡ್ಡ ಪರೀಕ್ಷೆಯ ಫಲಿತಾಂಶ ಅವತ್ತು. ಹತ್ತನೇ ತರಗತಿಯ ಪರೀಕ್ಷೆಗೆ ಹಾಗೆ ಕರೆಯುವ ವಾಡಿಕೆಯ ಕಾಲ ಅದು. ಪಾಸಾದವರಿಗೆ ಒಂದು ಕಿರೀಟ ಜನಮಾನಸದಲ್ಲಿ ಖಾಯಂ. ಹಾಗೆ ಫೇಲ್ ಆದವನಿಗೆ ಅದರ ವಿರುದ್ಧವಾದ ಪ್ರತಿಕ್ರಿಯೆ ಸಹಜವಾಗಿ ಇರಲೇಬೇಕಲ್ಲ. ಸಾಮಾನ್ಯವಾಗಿ ಊರಿನ ಒಳಗೆ 10 ನೇ ತರಗತಿಯ ಪ್ರಾರಂಭಿಕ ವರ್ಷದಲ್ಲೇ ಯಾರ್ಯಾರ ಮನೆ ಹುಡುಗರು ಓದುತ್ತಾ ಇದ್ದಾರೆ ಎಂಬ ಬಗ್ಗೆ ಅಂಗಡಿ ಮುಗ್ಗಟ್ಟುಗಳಲ್ಲೂ ಲೆಕ್ಕ ಅಬಾದಿತವಾಗಿರುತ್ತಿತ್ತು. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಯಾರು ಪಾಸಾದ್ರು ಅವನ ಮಗ ಪಾಸಾಗಲ್ಲ ಎಂದು ನೆಗೆಟಿವ್ ಭವಿಷ್ಯ ನುಡಿಯುವುದರಲ್ಲಿ ಕರಗತರಾಗಿದ್ದರು. ಇಂತ ವಿಷಯ ಮಂಡನೆ ಆದ ಮೇಲೆ ಆ ಬಗ್ಗೆ ಅಂಗಡಿ ಹೋಟೆಲ್ ಕಟ್ಟೆ ಮೇಲೆ ಸಂವಾದ ನಡೆಯುತ್ತಾ ಇತ್ತು.

ಆ ವರ್ಷ ನಾನು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಾ ಇದ್ದೆ. ಊರೊಳಗೆ ನಾನು ಪಾಸಾಗುವ ಪಟ್ಟಿಯಲ್ಲಿ ಇದ್ದ ಕಾರಣ ಅಪ್ಪನ ಕಿವಿಗೂ ಆ ವಿಷಯ ಬಿದ್ದಿತು. ಫಲಿತಾಂಶದ ದಿನ ಬಂತು ಅಪ್ಪ ತುಸು ಉತ್ಸಾಹದಿಂದ ತಮ್ಮ ಸೈಕಲ್ ಹತ್ತಿ ಫಲಿತಾಂಶ ನೋಡಲು ತುಮರಿ ಹೋಗಿ ಬರುವೆ ಎಂದು ಮನೆಯಲ್ಲಿ ಹೇಳಿ ನನ್ನನ್ನು ನೋಡಿ ಮನೆಯಲ್ಲೇ ಇರು ಎಂದು ಸೂಚನೆ ನೀಡಿ ಹೊರಟರು. ಮಧ್ಯಾಹ್ನವಾಯ್ತು ಅಪ್ಪ ಬರಲೇ ಇಲ್ಲ. ಹಾದಿ ಕಾದು ಕಾದು ಸಾಕಾಗಿ ನಾನು ಊರ ದಾರಿಯಲ್ಲಿ ಅಪ್ಪನ ಹಾದಿ ನಿರೀಕ್ಷಿಸಿ ಕಾಯುತ್ತ ಕುಳಿತ ಗಂಟೆ ನಂತರ ಅಪ್ಪನ ದರ್ಶನವಾಯ್ತು. ನನ್ನ ಕಂಡವರು ಸೈಕಲ್ ಇಳಿದು ಸೈಕಲ್ ದಬ್ಬು ಎಂದು ನನ್ನ ಕೈಲಿ ಕೊಟ್ಟರು. ನಾವಿಬ್ಬರೂ ಮನೆಯ ಕೊರಕಲು ರಸ್ತೆಯಲ್ಲಿ ನಡೆಯುತ್ತಾ ಸಾಗುತ್ತಾ ಇದ್ದೆವು. ಅಪ್ಪ ಮೌನವಾಗಿದ್ದರು. ತುಸು ಗಳಿಗೆ ನಂತರ ಧೀರ್ಘ ಮೌನ ಮುರಿದು “ಪರೀಕ್ಷೆ ಫಲಿತಾಂಶ ಬಂದಿದೆ, ಗಣಿತ ಮಾರ್ಕ್ಸ್ ಹಿಂದೆ ಮುಂದೆ ಆಗಿದೆ ಎಂದು ಮೇಸ್ಟ್ರು ಹೇಳಿದರು. 42 ಬರಬೇಕಾದ್ದು 24 ಆಗಿದೆಯಂತೆ” ಅಂದರು ಅಪ್ಪ. ನನಗೆ ಅರ್ಥ ಆಗಿತ್ತು. ನಾನು ಫೇಲ್ ಆಗಿದ್ದೆ…….

ಘಟನೆ..2

ಇಳಿ ಸಂಜೆ ಆಗಿತ್ತು. ದೀವರ ಮಕ್ಕಿ ಎಂಬ ಮುಳುಗಿದ ಊರಿನ ನೆತ್ತಿಯ ಸುತ್ತು ಹಾಕಿಕೊಂಡು ಹಿಮ್ಮಡಿ ಕಾನಿನಲ್ಲಿ ಸೂರ್ಯ ಮುಳುಗುವ ಉತ್ಸಾಹದಲ್ಲಿ ಇದ್ದ. ಎಸ್ ಎಸ್ ಎಲ್ ಸಿ ಫೇಲ್ ಆಗಿದ್ದ ನಾನು ಶಿಕಾರಿ ರುಚಿ ರೂಢಿಸಿಕೊಂಡಿದ್ದೆ. ಅವತ್ತು ನಾವು 20ಕ್ಕೂ ಹೆಚ್ಚು ಜನ ಕಾನು ಸುತ್ತಿ ಬಸವಳಿದು ಬಂದು ಗಡಿನೆಂಜಲು ಎಂಬ ಕಿಷ್ಕಿಂದೆ ತಲುಪಿದ್ದೆವು. ಗಡಿನೆಂಜಲು ಎಂದರೆ ಅದೊಂದು ಶಿಕಾರಿಯ ಆಯಕಟ್ಟಿನ ಜಾಗ. ಅಲ್ಲಿಂದ ಮುಂದೆ ಹತ್ತಾರು ಕಿ ಮೀ ದಟ್ಟ ಕಾಡು ಇದೆ. ಅಷ್ಟು ವಿಸ್ತಾರ ಜಾಗಕ್ಕೆ ಹೋಗಲು ಈ ಗಡಿನೆಂಜಲು ಎಂಬ ಕಿರಿದಾದ ಪ್ರದೇಶ ದಾಟಲೇಬೇಕು. ಇದೆ ಕಾರಣಕೆ ನಮ್ಮೂರಿನಲ್ಲಿ ದೀವರಮಕ್ಕಿ ಕಡೆ ಹಗಲು ಸೋವು ಶಿಕಾರಿ ಹೋಗುವುದು ಎಂದರೆ ಒಂದು ವಿಶ್ವಾಸ. ನಾವು ಒಳಗಡೆ ಗದ್ದಲ ಮಾಡಿಕೊಂಡು ಸೋವು ಹೋಡೆಯುತ್ತಾ ಹೋದರೆ ಬೆಚ್ಚಿದ ಹಂದಿಗಳು ಗಡಿನೆಂಜಲು ಆಯಕಟ್ಟಿನ ಜಾಗಕ್ಕೆ ಬಂದೇ ಬರುತ್ತವೆ. ಬರುವಾಗ ಸಾಕಷ್ಟು ಬಳಲಿ ನಿಧಾನವಾಗಿ ಬಂದಿರುತ್ತವೆ. ಈ ಕಾರಣಕ್ಕೆ ಅತ್ಯಂತ ಆಯದಾರಿ ಹೊಡೆತಗಾರರನ್ನು ಈ ಬಿಲ್ಲಿನಲ್ಲಿ ನಿಲ್ಲಿಸುವುದು ರೂಢಿ. ಇದೆ ಕಾರಣಕೆ ಗಡಿನೆಂಜಲು ಬಿಲ್ಲಿನಲಿ ಈಡು ಮೊಳಗಿತು ಎಂದರೆ ಒಳಗೆ ಸೋವು ಹೊಡೆಯುವ ಶಿಕಾರಿಗರಿಗೆ ದೊಡ್ಡ ಹರ್ಷ. ಇದೆ ಕಾರಣಕ್ಕೆ ಈ ಬಿಲ್ಲಿನಲ್ಲಿ ನಿಲ್ಲುವ ಬಿಲ್ಲುಗಾರನಿಗೆ ಒಂದು ಟಿವಿ ಬರುತ್ತಾ ಇತ್ತು. ಅದೊಂದು ಗ್ರೇಡ್. ಮೊದಲ ಗ್ರೇಡ್ ಬಿಲ್ಲುಗಾರರು ಮಾತ್ರ ಗಡಿನೆಂಜಲು ಬಿಲ್ಲಿನಲ್ಲಿ ನಿಲ್ಲುವರು. ಅವರ ಕೋವಿ.. ಧಿರಿಸು.. ಶಿಕಾರಿ ಆದ ನಂತರ ಅವರು ಕೊಡುವ ವಿವರಣೆ ಎಲ್ಲವೂ ಒಂದು ರಸಾಯನ. ಅತ್ಯಂತ ಸೂಕ್ಷ್ಮ ಬಿಲ್ಲು ಇದಾದ್ದರಿಂದ ಪ್ರಾಣಿಗಳು ಚಾಲಾಕಿ ಇರುವ ಕಾರಣ ಬೀಡಿ ಸೆಯ್ಯುವ, ಕೆಮ್ಮು ಇರುವ, ಕೂತಲ್ಲೇ ನಿದ್ದೆ ಮಾಡುವ ಕೊವಿದಾರರು ನಿಲ್ಲದಂತೆ ಎಚ್ಚರ ವಹಿಸಲಾಗುತ್ತಿತ್ತು.

ಆ ದಿವಸ ಎರೆಡೆರೆದು ಬಾರಿ ದೀವರಮಕ್ಕಿ ಕಾನು ಸುತ್ತು ಹಾಕಿ ಕುಕ್ಕೊಳ್ಳಿ ಕೆರೆ ಲಂಟಾನ ಪೊದೆ ಸೋವು ಹೊಕ್ಕಿದರೂ ಉಹುಂ ಈಡು ಮೊಳಗಲಿಲ್ಲ. ಸೋವು ಹೊಡೆದು ಸುಸ್ತಾಗಿ ಗಡಿನೆಂಜಲು ಬಿಲ್ಲಿಗೆ ಬಂದಾಗ ಬಿಲ್ಲುಗಾರರು ನಮ್ಮ ಜತೆ ಮಾತಿಗೆ ಮಾತು ಬೆಳೆಸಿ ನೀವು ಸೋವು ಹೊಡೆದದ್ದೇ ಸರಿಯಾಗಿಲ್ಲ ಎಂದರು. ವಾಸ್ತವವಾಗಿ ಈ ಬಿಲ್ಲುಗಾರರು ಜಮೀನ್ದಾರರು ಇದ್ದ ಹಾಗೆ. ನಾವು ಸೋವು ಹೊಡೆವವರು ಗೇಣಿ ರೈತರ ಹಾಗೆ. ಇವರು ಬಿಲ್ಲಿನಲ್ಲಿ ಕೂರುವವರು. ಬೆವರು ಮಾತ್ರ ಸೋವು ಹೊಡೆಯುವವರದ್ದು. ಆದರೆ ಶಿಕಾರಿಯ ಕಿರೀಟ ಅವರಿಗೆ ಮಾತ್ರ ಒಲಿಯುತ್ತಾ ಇತ್ತು. ಜತೆಗೆ ಶಿಕಾರಿಯಲ್ಲಿ ಹಂದಿ ಹೊಡೆದಾಗ ಹಿಂದಿನ ಬಲ ಭಾಗದ ತೊಡೆ, ಬೆನ್ನು ಮೂಳೆಯ ಅರ್ಧ ಭಾಗ, ಹೃದಯದ ಭಾಗ ಎಲ್ಲವೂ “ವಾಗ” ಹೆಸರಿನಲ್ಲಿ ಅವರಿಗೆ ಹೋಗುತ್ತಾ ಇತ್ತು. ಇದರ ಜತೆ ಕೋವಿಯ ಪಾಲು ಸೇರಿಕೊಂಡು ಒಟ್ಟಾರೆ ಶೇಕಡಾ 40 ಭಾಗ ಮಾಂಸ ಬಿಲ್ಲುಗಾರಗೆ ಹೋಗುತ್ತಾ ಇತ್ತು. ಇದು ಶಿಕಾರಿ ಒಳಗಿನ ಜಮೀನ್ದಾರಿಕೆ ಆಗಿತ್ತು. ಈ ಕಾರಣಕ್ಕಾಗಿ ಕೆಲವರು ಕ್ರಮೇಣ ಸುಧಾರಣೆ ಕ್ರಮವಾಗಿ ಹೊತ್ತ ಪಾಲು, ನಾಯಿ ಪಾಲು ಇತ್ಯಾದಿ ಜಾರಿಗೆ ತಂದಿದ್ದರು. ಸರ್ಕಾರದ ಕಲ್ಯಾಣ ಯೋಜನೆಗಳಂತೆ.

ಆ ದಿವಸ ಶಿಕಾರಿ ಆಗಲಿಲ್ಲ. ಮಾತಿಗೆ ಮಾತು ಬೆಳೆದು ಕೊನೆಗೆ ಅದು “ನೀವು ಹಂದಿ ಎಬ್ಬಿಸಿ ತೋರಿಸಿ ನಾವು ಹೊಡೆಯದೇ ಇದ್ದರೆ ಹೇಳಿ” ಎಂಬ ಪಂಥಾಹ್ವಾನಕೆ ಬಂದು ನಿಂತಿತು. ಮಂಗಿಸೇರಿ ಎಂ ಪಿ ಎಂ ನೆಡುತೋಪಿನಲ್ಲಿ ಕಟಾವು ಮಾಡಿದ ಕಾರಣ ಹಂದಿ ಅಲ್ಲೇ ಬೆಚ್ಚಗೆ ಮಲಗಿದ್ದಾವೆ ಎಂಬ ತೀರ್ಮಾನಕ್ಕೆ ಬಂದು ಹಂದಿ ಎಬ್ಬಿಸುವ ತಂತ್ರಗಾರಿಕೆ ಲೆಕ್ಕ ಹಾಕಿ ನಾವು ನಮ್ಮ ಪಾಡಿಗೆ ಸೋವಿಗೆ ಹೊರಟೆವು. ಬಿಲ್ಲುಗಾರರು ತಮ್ಮದೇ ಲೆಕ್ಕಾಚಾರದಲಿ ಬಿಲ್ಲು ಲೆಕ್ಕ ಹಾಕಿ ಸೂಚನೆ ನೀಡಿಕೊಂಡು ಮತ್ತೊಮ್ಮೆ ಕೋವಿ ಪುರುಣಿಗೆ ಪಿನ್ ಹಾಕಿ ಮೇಲೆ ಮಸಿ ಬಿಟ್ಟುಕೊಂಡು, ಕೇಪು ಬದಲಿಸಿ ಸಿದ್ದತೆಯಲಿ ಹೊರಟರು.

ಇಳಿ ಸಂಜೆ ಕರೂರಿನ ಕಾನು ಆವರಿಸುತ ಇತ್ತು. ನಾವು ಅರ್ಧ ಎಂ ಪಿ ಎಂ ನೆಡುತೋಪು ಸೋವು ಹೊಕ್ಕಿದ್ದೆವು. ನನ್ನ ಜತೆಗೆ ಇದ್ದ ನನ್ನ ಮಾವನ ಮಗ ಹಂದಿ ಮಲಗಿದ್ದು ಗುರುತಿಸಿದ. ನಾವು ಎಷ್ಟೇ ಕೂಗಿದರು ಅವು ಏಳಲಿಲ್ಲ. ನಾಯಿಗಳು ಹಸಿವಾಗಿ ಮನೆ ಸೇರಿದ್ದವು. ಹಂದಿ ಎಬ್ಬಿಸುವುದು ಸರಿ ಅವು ನೇರವಾಗಿ ನಮ್ಮೆಡೆ ನುಗ್ಗಿ ಬಂದರೆ ತಪ್ಪಿಸಿಕೊಳ್ಳಲು ಮರವೂ ಇಲ್ಲ. ಕೊನೆಗೂ ಧಾವಂತದಲಿ ಒಂದು ನಿರ್ಧಾರಕ್ಕೆ ಬಂದು ಹಂದಿ ಬೆದರಿಸಲು ಮತ್ತು ಅದು ನಮ್ಮೆಡೆಗೆ ಬರುವುದನ್ನ ತಪ್ಪಿಸಲು ಸಣ್ಣದೊಂದು ಬೆಂಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿಸಿದೆವು. ನೋಡು ನೋಡುತ್ತಲೇ ಬೆಂಕಿ ಒಣಗಿದ ಎಂ ಪಿ ಎಂ ಕಟಾವಿನ ನೆಡುತೋಪು ಆವರಿಸಿತು. ದಟ್ಟ ಹೊಗೆ. ಬೆಂಕಿ ಅಂದ್ರೆ ಅಂತಿಂತ ಬೆಂಕಿಯಲ್ಲ. ಸತ್ಯ ಎಂ ಪಿ ಎಂ ಗುಡ್ಡಕ್ಕೆ ಬೆಂಕಿ ಹಾಕಿದ ಎಂದು ಜತೆಗಾರರು ಊರೆಲ್ಲ ಹೇಳಿ ಮನೆ ಸೇರಿಕೊಂಡರು. ತಡ ಸಂಜೆ ಆದರಿಂದ ಗಾಳಿ ಕಡಿಮೆ ಇದ್ದ ಕಾರಣ ಬೆಂಕಿ ಹತ್ತಿಕೊಂಡ ಬರದಲ್ಲಿ ಚಾಚಲಿಲ್ಲ. ಕೆಲವು ಲಾಟ್ ಸುಟ್ಟು ಹೋದವು. ಸತ್ಯ ಜೈಲಿಗೆ ಹೋಗುವುದು ಕಾಯಂ ಎಂಬ ಸುದ್ದಿ ಊರಿನಲ್ಲಿ ಬೆಂಕಿ ಕೆನ್ನಾಲಿಗೆಗೂ ಮೀರಿ ನಾಲಿಗೆಯಿಂದ ನಾಲಿಗೆ ಹರಿದಾಡಿತು. ಎಂ ಪಿ ಎಂ ಬಿಗುವಿನ ಕಾಲ ಅದು ಹಾಗೆ ಊರಿಗೆ ಊರೇ ಭಯ ಪಡುವ ಕಾಲವೂ ಅದಾಗಿತ್ತು.


ಮಕ್ಕಳು ಸೋತಾಗ ತಂದೆ ಹೇಗೆ ನಡೆದುಕೊಳ್ಳಬೇಕು..? ಮಕ್ಕಳು ಗೆದ್ದಾಗ ಸಂಭ್ರಮಿಸುವ, ಹೆಮ್ಮೆ ಪಡುವ, ನನ್ನ ಮಗ ಯಾ ಮಗಳು ಎಂದು ಎದೆ ಉಬ್ಬಿಸುವ ನಾವುಗಳು ನಮ್ಮ ಮಕ್ಕಳು ಸೋತಾಗ, ಅದರಲ್ಲೂ ನಮ್ಮ ಮಕ್ಕಳು ತಪ್ಪು ಮಾಡಿದಾಗ ನಡೆದುಕೊಳ್ಳುವ ನಡವಳಿಕೆ ಹೇಗೆ ಬದಲಾಗುತ್ತದೆ. ಅವನು ನನ್ನ ಮಗನೇ ಅಲ್ಲ ಎನ್ನುವ, ನನಗೆ ಮುಖ ತೋರಿಸಬೇಡ ಎನ್ನುವ, ಅವನೊಬ್ಬ ಹಾಗೆ ಹೀಗೆ ಎಂದು ಬಿಡು ಮಾತುಗಳ ನಿಂದನೆ ಮಾಡುವ ಅಪ್ಪಂದಿರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಜಗತ್ತು ಗೆದ್ದು ಬಂದರು ಮನೆಯೊಳಗೆ ಪರಕೀಯ ಆಗಿರುವವರನ್ನು ನಾನು ನೋಡಿರುವೆ. ಅಪ್ಪ ಮಗ ವೈರಿಗಳ ಹಾಗೆ ಕಾದಾಡುವ ಮನೆಗಳಲ್ಲಿ ಅಧ್ಯಕ್ಷನಾಗಿ ಪಂಚಾಯತಿ ಮಾಡಿ ಬಂದಿರುವೆ. ಪ್ರತಿ ಮಗನಿಗೆ ಅಪ್ಪನನ್ನು ಮೆಚ್ಚಿಸುವುದು ಸಣ್ಣ ಸವಾಲು ಅಲ್ಲ. ಅದೊಂದು ಜೀವನ ಹೋರಾಟ. ಮಗ ಏನೇ ಮಾಡಿದರೂ ತಪ್ಪು ಹುಡುಕುವ ಅಪ್ಪಂದಿರು ಕಡಿಮೆ ಇಲ್ಲ. ತಾವು ಹೇಳಿದ್ದೆ ನಡೆಯಬೇಕು ಎಂಬ ಮೊಂಡುತನ ಮೈ ಗೂಡಿಸಿಕೊಂಡರೆ ಮುಗಿದೇ ಹೋಯ್ತು. ಇದರ ತದ್ವಿರುದ್ದವಾಗಿ ಅಪ್ಪನಿಗೆ ಏನು ಗೊತ್ತು, ಅವನೇನು ಮಾಡಿದ್ದಾನೆ ಎಂಬ ದಾಷ್ಟ್ಯದ ಮಕ್ಕಳು ಕೂಡ.

ಆದರೆ ನನ್ನ ಅಪ್ಪ ಪೇಟೆ ತಿಮ್ಮಣ್ಣ ಈ ವಿಚಾರದಲ್ಲಿ ಬಲು ಎತ್ತರ. ದೊಡ್ಡ ಪರೀಕ್ಷೆ ನಾನು ಸೋತಾಗ ಅಪ್ಪ ನನಗೆ ಅದನ್ನು ಪಾಸಿಟಿವ್ ಆಗಿ ಹೇಳಿದ ರೀತಿಯೇ ಅದ್ಭುತ. ಮಾರನೇ ದಿನ ನನ್ನ ತಲೆ ನೇವರಿಸಿ ತಮ್ಮ ಬದುಕಿನ ಸೋಲಿನ ಕಥೆ ಹೇಳಿ. ಆ ಕಥೆ ಮುಂದೆ ಈ ಸೋಲು ಏನು ಅಲ್ಲ ಅನ್ನಿಸುವಂತೆ ಮಾಡಿದರು. ಸರ್ವಜ್ಞ ಡಿಗ್ರಿ ತೆಗೆದುಕೊಂಡಿಲ್ಲ ಎಂದು ವಚನ ಹೇಳಿ ದೈರ್ಯ ತುಂಬಿದರು.

ಎಂ ಪಿ ಎಂ ಬೆಂಕಿ ಹಾಕಿದ ಮಾರನೇ ದಿನ ಇಲಾಖೆ ranger ಊರಿಗೆ ಬಂದಿದ್ದರು. ಅಪ್ಪ ನನ್ನ ಮನೆಯಲ್ಲೇ ಬಿಟ್ಟು ಅಧಿಕಾರಿಗೆ ಎದುರಾದರು. ಪಂಚಾಯತಿ ಮಾಡುತ್ತಾ ಇದ್ದ ನಮ್ಮ ಅಪ್ಪ ಗೆ ಅದು ಸ್ವತಃ ಆರೋಪ ಕೇಳುವ ಹೊತ್ತು ಕೂಡ. ನನ್ನ ಮಗ ತಪ್ಪು ಮಾಡಿದ್ದಾನೆ. ಆದರೆ ಕೇಸ್ ಹಾಕುವುದಾದರೆ ನನ್ನ ಮೇಲೆ ಹಾಕಿ, ತಪ್ಪು ಬರಹ ತೆಗೆದುಕೊಂಡು ಬಿಡುವುದಾದರೆ ಅವನ ಕರೆದುಕೊಂಡು ನಾಳೆ ಆಪೀಸ್ ಬರುವೆ ಎಂದರಂತೆ. ಮಾರನೇ ದಿನ ಸಾಗರ ಕಚೇರಿಯಲ್ಲಿ ಅಪ್ಪ ನನ್ನ ಕರೆದುಕೊಂಡು ಹೋಗಿ 500 ರೂ ದಂಡ ಕಟ್ಟಿಸಿ ತಪ್ಪೊಪ್ಪಿಗೆ ಪತ್ರ ಅವರ ಹೆಸರಿನಲ್ಲೇ ಬರೆದುಕೊಟ್ಟು ” ನನ್ನ ಮಗ ಓದಬೇಕು, ಅವನಿಗೆ ತೊಂದರೆ ಆಗಬಾರದು” ಎಂದರು ದೃಢವಾಗಿ ನನ್ನನು ದಿಟ್ಟಿಸಿ ನೋಡಿ. ಅಪ್ಪನ ಅಂತರಾಳ ಹಾಗೆ ದರ್ಶನವಾಗಿತ್ತು.

ಅದೇ ವರ್ಷ ನಾನು ಎಸ್ ಎಸ್ ಎಲ್ ಸಿ ಕಟ್ಟಿ ಪಾಸಾದೆ. ಕಾಲೇಜು ಹೊರಡಲು ಸಿದ್ಧವಾದ ನನ್ನ ಕರೆದು ” ತೋಟ ನಾ ಮಾಡುವೆ, ಈ ಊರಿಗೆ ಅಕ್ಷರ ಬೇಕು, ಇಲ್ಲಾ ಅಂದ್ರೆ ತಿಂದು ಮುಗಿಸುತ್ತಾರೆ, ಓದು” ಅಂದರು. ಇಂದಿಗೂ ನನ್ನ ಓದು ಮುಗಿದಿಲ್ಲ… ಓದುತ್ತಾ ಇರುವೆ. ಇದೇ ಕಾರಣಕ್ಕೆ ನಾನು ಸೋತವರ ಪರ. ಫೇಲ್ ಆದವರೇ ನನ್ನ ಮೊದಲ ಬಂಧುಗಳಯ್ಯ.

ಜಿ.ಟಿ ಸತ್ಯನಾರಾಯಣ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *