

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ “ದಾನ” ಮಾಡಲು ತೀರ್ಮಾನಿಸಲಾಗಿದೆ.
ಕಮಲಾಕರ ಭಂಡಾರಿಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿ ಗ್ರಾಮ ಪಂಚಾಯತಿ ಸದಸ್ಯರಾಗಿ, ಅಧ್ಯಕ್ಷರಾಗಿ ಸಾರ್ವಜನಿಕ ಸೇವೆ ಮಾಡಿದವರು. ತುಂಬಾ ಕ್ರಿಯಾಶೀಲವಾಗಿ ಎಲ್ಲಾ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಬಂಡಾಯ ಸಾಹಿತಿ ಡಾ. ಆರ್.ವಿ. ಭಂಡಾರಿಯವರ ಅಳಿಯ, ಡಾ. ವಿಠ್ಠಲ ಭಂಡಾರಿಯವರ ಬಾವ ಇವರು. ಸಿದ್ದಾಪುರದ ಯಾವುದೇ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಇವರ ಹಾಜರಾತಿ ತಪ್ಪುತ್ತಿರಲಿಲ್ಲ. ತನ್ನ ಊರಾದ ಇಟಗಿಯಲ್ಲಿ ವಾರಗಟ್ಟಲೆ ನಡೆಯುವ ಯಕ್ಷಗಾನ ತಾಳಮದ್ದಲೆ ಸಂಘಟಕರಲ್ಲಿ ಇವರೂ ಒಬ್ಬರಾಗಿದ್ದರು. ತುಂಬ ಬಡತನವಿದ್ದರೂ ಎಂದಿಗೂ ಸಮಾಜಮುಖಿ ಕೆಲಸಗಳಿಂದ ಹಿಂದೆಬಿದ್ದವರಲ್ಲ. ಆರೈಕೆ ಆತಿಥ್ಯಗಳಿಗೆ ಎಂದಿಗೂ ಮುಂದು. ಅಧಿಕಾರಸ್ಥರು ಕೈಬಾಯಿ ಸ್ವಚ್ಛ ಇಟ್ಟುಕೊಳ್ಳಬೇಕೆಂದು ಯಾವಾಗಲೂ ಎಲ್ಲರೊಂದಿಗೆ ಚರ್ಚಿಸುವವರು. ಕಾಲಕ್ರಮೇಣವಾಗಿ ಇವರು ಜನ ಚಳುವಳಿಗಳಲ್ಲಿ ಸಾಂಸ್ಕೃತಿಕ ಚಳುವಳಿಯ ಕೆಲಸಗಳಲ್ಲಿ ಪುಸ್ತಕ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡರು. ಬಂಡಾಯ ಪ್ರಕಾಶನದ ಪರವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದಲ್ಲಿ, ಸಹಯಾನ ಕೆರೆಕೋಣದ ಕಾರ್ಯಗಳ ಜಾರಿ ಕೆಲಸಗಳಲ್ಲಿ ಜೊತೆಯಾದರು.

ಸಿದ್ದಾಪುರದಲ್ಲಿದ್ದ ಡಾ. ಆರ್. ವಿ. ಪುಸ್ತಕ ಮನೆಯನ್ನು ಕೆಲವು ವರ್ಷ ಮಗನೊಂದಿಗೆ ನಡೆಸಿದರು. ಸಿದ್ದಾಪುರದಲ್ಲಿ ಸಿಐಟಿಯು ನೇತೃತ್ವದ ಅಂಗನವಾಡಿ ಮತ್ತು ಅಕ್ಷರದಾಸೋಹ ನೌಕರರ ಸಂಘ ಕಟ್ಟಲು ಕೈಲಾದಷ್ಟು ಸಹಾಯ ಮಾಡಿದರು. ಸಿದ್ದಾಪುರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಕಟ್ಟಲು ಪ್ರಯತ್ನಿಸಿದ್ದರು. ಕಟ್ಟಡ ಕಾರ್ಮಿಕರ ಸಂಘಟನೆ ಕಟ್ಟಬೇಕೆಂದು ಆರಂಭಿಕ ಸಭೆಗಳಿಗೆ ಸಹಾಯ ಮಾಡಿದ್ದನ್ನು ನೆನೆಯುತ್ತೇವೆ.
ತನ್ನ ಸುತ್ತಲಿನ ಅಥವಾ ಪರಿಚಯದ ಯಾರದ್ದೇ ಅನಾರೋಗ್ಯಕ್ಕೂ ಮಿಡಿಯುತ್ತಿದ್ದರು ಮತ್ತು ಕೆಲವುಬಾರಿ ಆಸ್ಪತ್ರೆಯಲ್ಲಿ ಇದ್ದು ಉಪಚಾರ ಮಾಡುತ್ತಿದ್ದರು. ತಮ್ಮ ಬಾಳಸಂಗಾತಿ ಇಂದಿರಾ ಅವರನ್ನು ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇವರ ಸಮಾಜಮುಖಿ ಕೆಲಸಗಳಿಗಾಗಿ ಸಹಕಾರಿ ಸಂಘದಿಂದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮ್ಮಾನಗಳಾಗಿವೆ. ಇತ್ತೀಚೆಗೆ ಕೆಲವು ತಿಂಗಳಿನಿಂದ ಅನಾರೋಗ್ಯ ಕಾಣಿಸಿಕೊಂಡು ಉಡುಪಿಯಲ್ಲಿ ಮಕ್ಕಳ ಆರೈಕೆಯಲ್ಲಿದ್ದವರು, ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ದಿನಾಂಕ ಜುಲೈ ೨೭ ರಂದು ಬೆಳಿಗ್ಗಿನ ಜಾವ ೩ ರ ಸುಮಾರಿಗೆ ಕೊನೆಯುಸಿರೆಳೆದರು.


ಅವರು ಬಾಳಸಂಗಾತಿ ಇಂದಿರಾ ಭಂಡಾರಿ, ಮಕ್ಕಳಾದ ಛಾಯಾ ಐಕೆ, ಅನಿಲ್ ಐಕೆ, ಅಳಿಯ ವೆಂಕಟೇಶ, ಸೊಸೆ ಶ್ವೇತಾ, ಮೊಮ್ಮಕ್ಕಳಾದ ರೋಹನ್, ಸಾನಿಧ್ಯಾ, ಸಾರ್ಥಕ ಮತ್ತು ಬಂಧುಬಳಗ, ಸಾಹಿತ್ಯ ಸಹೃದಯ ಆಪ್ತವಲಯದವರನ್ನು ಅಗಲಿದ್ದಾರೆ.
ಸಂಪ್ರದಾಯಸ್ಥ ಕುಟುಂಬದಿಂದ ಬಂದರೂ ತನ್ನ ಕೆಲಸದ ಮೂಲಕ ವೈಜ್ಞಾನಿಕ ತಿಳಿವಳಿಕೆಯತ್ತ ಸಾಗಿದ್ದರು. ಹಾಗಾಗಿ ಅದಾಗಲೇ ತನ್ನ ಕಣ್ಣುಗಳನ್ನು ದಾನ ಮಾಡಲು ನೊಂದಣಿ ಕೂಡ ಮಾಡಿದ್ದರು. ಅವರಿಗೆ ನಮ್ಮೆಲ್ಲರ ನಮನಗಳು.
ಯಮುನಾ ಗಾಂವ್ಕರ್

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________

